ADVERTISEMENT

ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ತಾಯಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 14:58 IST
Last Updated 24 ಜನವರಿ 2020, 14:58 IST

ಮಂಡ್ಯ: ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆಯೊಬ್ಬರು ಶುಕ್ರವಾರ ತಾಲ್ಲೂಕಿನ ತಿಬ್ಬನಹಳ್ಳಿ ಬಳಿಯ ವಿಶ್ವೇಶ್ವರಯ್ಯ ನಾಲೆಗೆ ತಮ್ಮಿಬ್ಬರು ಮಕ್ಕಳನ್ನು ತಳ್ಳಿ, ತಾವೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಹುಳ್ಳೇನಹಳ್ಳಿ ಗ್ರಾಮದ ಜ್ಯೋತಿ (33) ತಾಯಿ, ನಿಸರ್ಗ (7), ಪವನ್ (4) ಮೃತ ಮಕ್ಕಳು. ಶುಕ್ರವಾರ ಮಧ್ಯಾಹ್ನ ನಾಲೆಗೆ ಬಿದ್ದು ಕೊಚ್ಚಿ ಹೋಗುತ್ತಿದ್ದ ಜ್ಯೋತಿಯನ್ನು ಅಕ್ಕಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಮೇಲೆತ್ತಿ ರಕ್ಷಣೆ ಮಾಡಲು ಯತ್ನಿಸಿದರು. ಆದರೆ ಸಾಕಷ್ಟು ನೀರು ಕುಡಿದಿದ್ದ ಕಾರಣ ಅವರು ಮೃತಪಟ್ಟರು. ಇಬ್ಬರೂ ಮಕ್ಕಳು ಕೊಚ್ಚಿ ಹೋಗಿದ್ದು ಪೊಲೀಸರು ಮೃತದೇಹಕ್ಕಾಗಿ ಹುಡುಕುತ್ತಿದ್ದಾರೆ. ಶಿವಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದವರಾದ ಜ್ಯೋತಿಯನ್ನು ಹುಳ್ಳೇನಹಳ್ಳಿ ಗ್ರಾಮದ ನಂಜಪ್ಪ ಅವರಿಗೆ ಕೊಟ್ಟು 10 ವರ್ಷಗಳ ಹಿಂದೆ ಮದುವೆಮಾಡಿ ಕೊಡಲಾಗಿತ್ತು. ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.