ADVERTISEMENT

`ಭವನಕ್ಕೆ ರೂ 5 ಲಕ್ಷ ಸಹಾಯಧನ'

ಕೆಕೆಎಂಪಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 8:18 IST
Last Updated 2 ಸೆಪ್ಟೆಂಬರ್ 2013, 8:18 IST

ಮೈಸೂರು: `ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಭವನ ನಿರ್ಮಾಣಕ್ಕೆ ತಾಯಿಯ ಹೆಸರಿನಲ್ಲಿ ರೂ 5 ಲಕ್ಷ ಸಹಾಯಧನ ನೀಡುತ್ತೇನೆ' ಎಂದು ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್ ಘೋಷಿಸಿದರು.

ಗಾಯತ್ರಿಪುರಂ ಉತ್ತರ 1ಹೇ ಹಂತದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ಕೆಕೆಎಂಪಿ) ಭವನ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಗಾಯತ್ರಿಪುರಂ ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ. ಆದರೂ ನಮ್ಮ ಕ್ಷೇತ್ರದಲ್ಲಿರುವ ಮರಾಠ ಜನಾಂಗದವರ ಮೇಲೆ ಇರುವ ಪ್ರೀತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ವೈಯಕ್ತಿಕವಾಗಿ ರೂ 5 ಲಕ್ಷ ನೀಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್,ಸಂಸದ ಅಡಗೂರು ಎಚ್. ವಿಶ್ವನಾಥ್ ಮತ್ತು ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ ಅವರೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಅನುದಾನ ಕೊಡಿಸಲು ಶ್ರಮಿಸುತ್ತೇನೆ' ಎಂದು ಭರವಸೆ ನೀಡಿದರು.

`ಮರಾಠರು ರಾಜ್ಯದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ ಇವರ ಸಂಖ್ಯೆ ತೀರಾ ಕಡಿಮೆ. ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮರಾಠರು ಆರ್ಥಿಕವಾಗಿ ಅಷ್ಟಾಗಿ ಮುಂದುವರಿದಿಲ್ಲ. ಕೆಕೆಎಂಪಿ ರಾಜ್ಯದ 18 ಜಿಲ್ಲೆಗಳಲ್ಲಿ ಭವನಗಳನ್ನು ನಿರ್ಮಾಣ ಮಾಡಿರುವುದೇ ದೊಡ್ಡ ಸಾಧನೆ. ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಭವನ ಶೀಘ್ರವೇ ನಿರ್ಮಾಣ ಆಗಿ ಸಾರ್ವಜನಿಕರಿಗೆ ಸದುಪಯೋಗ ಆಗಲಿ. ನಿಮಗೆ ಕಷ್ಟಕಾಲ ಬಂದಾಗ ಬೆನ್ನೆಲುಬಾಗಿ ನಿಲ್ಲುತ್ತೇನೆ' ಎಂದು ತಿಳಿಸಿದರು.

ಕೆಕೆಎಂಪಿ ರಾಜ್ಯ ಘಟಕ ಅಧ್ಯಕ್ಷ ವಿ.ಎ. ರಾಣೋಜಿರಾವ್ ಸಾಠೆ ಅಧ್ಯಕ್ಷತೆ ವಹಿಸಿದ್ದರು. ಕೆಕೆಎಂಪಿ ಪ್ರಧಾನ ಕಾರ್ಯದರ್ಶಿ ಶಿವಾಜಿರಾವ್ ಜಾಧವ್, ರಾಜ್ಯ ಉಪಾಧ್ಯಕ್ಷ ಎಸ್.ಆರ್. ಶಿಂಧೆ, ಪಾಲಿಕೆ ಸದಸ್ಯ ಸುನಿಲ್,ಕೈಗಾರಿಕೋದ್ಯಮಿ ನಾರಾಯಣರಾವ್, ವಾಕೋಡೆ, ಕಾಂಗ್ರೆಸ್ ಮುಖಂಡ ಧ್ರುವರಾಜ್, ಕೆಕೆಎಂಪಿ ಜಿಲ್ಲಾ ಘಟಕ ಅಧ್ಯಕ್ಷ ಕೇಶವನಾಥರಾವ್ ಜಾಧವ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಸಾಠೆ ಅವರು ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಗಣ್ಯರಿಗಾಗಿ ಕಾದಿದ್ದರಿಂದ ಕಾರ್ಯಕ್ರಮ ಒಂದು ತಾಸು ತಡವಾಗಿ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.