ADVERTISEMENT

ವರುಣಾ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ...

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 7:00 IST
Last Updated 7 ಮಾರ್ಚ್ 2011, 7:00 IST
ವರುಣಾ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ...
ವರುಣಾ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ...   

ಮೈಸೂರು: ನೆಹರು ಯುವ ಕೇಂದ್ರದ ವತಿಯಿಂದ ತಾಲ್ಲೂಕು ವರುಣಾ ಗ್ರಾಮದಲ್ಲಿ ಭಾನುವಾರ  ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಪ್ರದೀಪ್, ಮಹಿಳೆಯರ ವಿಭಾಗ ದಲ್ಲಿ ಪ್ರಿಯಾಂಕ ಹಾಗೂ ಯುವತಿಯರ ವಿಭಾಗದಲ್ಲಿ ಬೇಬಿ ಸುಮಯಾ ಪ್ರಥಮ ಸ್ಥಾನ ಪಡೆದುಕೊಂಡರು.ನಂಜಪ್ಪ ಅವರ ಜಮೀನಿನಲ್ಲಿ ಕೆಸರುಗದ್ದೆ ಓಟ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾ ಗಿತ್ತು. ಕೆಸರು ಗದ್ದೆ ಓಟದ ಸ್ಪರ್ಧೆಯಲ್ಲಿ ಈ ಬಾರಿ ಮಹಿಳೆಯರೂ ಪಾಲ್ಗೊಂಡಿದ್ದರು. ಪುರುಷರ ವಿಭಾಗದಲ್ಲಿ 48 ಹಾಗೂ ಮಹಿಳೆಯರ ವಿಭಾಗದಲ್ಲಿ 23 ಸ್ಪರ್ಧಾಳುಗಳು ಭಾಗವಹಿಸಿದ್ದರು.

ಸ್ಪರ್ಧಾ ವಿಜೇತರು

ಪುರುಷರ ವಿಭಾಗ-
ಪ್ರದೀಪ್, ತಿ.ನರಸೀಪುರ (ಪ್ರಥಮ), ಎಂ.ಸೂರ್ಯ, ಮೈಸೂರು (ದ್ವಿತೀಯ), ದೇವೇಂದ್ರ, ವರುಣ (ತೃತೀಯ).
ಮಹಿಳೆಯರ ವಿಭಾಗ: ಪ್ರಿಯಾಂಕ, ವರುಣ (ಪ್ರಥಮ), ವನಿತಾ, ಮೈಸೂರು (ದ್ವಿತೀಯ), ರಾಜೇಶ್ವರಿ (ತೃತೀಯ), ಭಾಗ್ಯ (ಸಮಾಧಾನಕರ).
ಯುವತಿಯರ ವಿಭಾಗ: ಬೇಬಿ ಸುಮಯಾ (ಪ್ರಥಮ), ಯಶಸ್ವಿನಿ (ದ್ವಿತೀಯ), ತಿಪ್ಪವ್ವ ಸಣ್ಣಕ್ಕಿ (ತೃತೀಯ).
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ತಿ.ನರಸೀಪುರ ತಂಡ ಪ್ರಥಮ ಹಾಗೂ ವರುಣ ಗ್ರಾಮದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು. ಮಹಿಳೆಯರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ ಸ್ಥಾನ ಪಡೆಯಿತು.

ಕಾರ್ಯಕ್ರಮಕ್ಕೆ ಮೇಯರ್ ಸಂದೇಶ್‌ಸ್ವಾಮಿ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಸುನೀತಾ ವೀರಪ್ಪಗೌಡ ಐಕ್ಯತಾ ಪ್ರಮಾಣ ವಚನ ಬೋಧಿಸಿದರು. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಉಪಮೇಯರ್ ಪುಷ್ಪಲತಾ ಜಗನ್ನಾಥ್, ತಾ.ಪಂ. ಸದಸ್ಯ ಕೃಷ್ಣಮೂರ್ತಿ, ವರಕೋಡು ಪ್ರಕಾಶ್, ವರುಣ ನಾಗರಾಜು, ವಿ.ಟಿ.ಮಾಧು ಭಾಗವಹಿಸಿದ್ದರು.

ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ಎಂ.ಎನ್.ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪನ್ಯಾಸಕ ಪೃಥ್ವಿರಾಜ್ ನಿರೂಪಿಸಿದರು.

ತಿಪ್ಪವ್ವ ಸಣ್ಣಕ್ಕಿ ಪ್ರಥಮ
ಮೈಸೂರು: ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಚಾಮುಂಡಿ ಬೆಟ್ಟ ಹತ್ತುವ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ತಿಪ್ಪವ್ವ ಸಣ್ಣಕ್ಕಿ ಹಾಗೂ ಪುರುಷರ ವಿಭಾಗದಲ್ಲಿ ಸಿದ್ದೇಶ್ ಪ್ರಥಮ ಸ್ಥಾನ ಪಡೆದುಕೊಂಡರು.ಒಟ್ಟು 175 ಜನ ಸ್ಪರ್ಧಾಳುಗಳು ಇದ್ದರು. ಬೆಳಿಗ್ಗೆ 7 ಗಂಟೆಗೆ ಬೆಟ್ಟ ಹತ್ತಲು ಆರಂಭಿಸಿದ ಸ್ಪರ್ಧಾಳು ಗಳು 8.15 ಗಂಟೆಗೆ ಬೆಟ್ಟದ ತುದಿ ತಲುಪಿದರು. ಹಲವರು ಬೆಟ್ಟದ ಮಧ್ಯೆಯೇ ಸುಸ್ತಾಗಿ ಸ್ಪರ್ಧೆಯಿಂದ  ಹಿಂದೆ ಸರಿದರು.
ವಿಜೇತರು: ಮಹಿಳೆಯರ ವಿಭಾಗ- ತಿಪ್ಪವ್ವ ಸಣ್ಣಕ್ಕಿ (ಪ್ರಥಮ), ರೀನಾ ಜಾರ್ಜ್ (ದ್ವಿತೀಯ), ನವ್ಯ (ತೃತೀಯ).
ಪುರುಷರ ವಿಭಾಗ: ಸಿದ್ದೇಶ್ (ಪ್ರಥಮ), ಕೃಷ್ಣ (ದ್ವಿತೀಯ), ರಕ್ಷಿತ್‌ಗೌಡ (ತೃತೀಯ).
ಕಾರ್ಯಕ್ರಮಕ್ಕೆ ಮೇಯರ್ ಸಂದೇಶ್‌ಸ್ವಾಮಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಸುನೀತಾ ವೀರಪ್ಪಗೌಡ ಚಾಲನೆ ನೀಡಿದರು. ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ಎಂ.ಎನ್.ನಟರಾಜ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಹಾಜರಿದ್ದರು.

ಸಂಚಾರ ಪೊಲೀಸರಿಗೆ ಯೋಗ ನಡಿಗೆ

ಮೈಸೂರು: ಸದಾ ಒತ್ತಡದಲ್ಲಿ, ವಾಯು ಮತ್ತು ಶಬ್ದ ಮಾಲಿನ್ಯದ ನಡುವೆ ಕೆಲಸ ಮಾಡುವ ಸಂಚಾರ  ಪೊಲೀಸರಿಗೆ ಭಾನುವಾರ ಬೆಳಿಗ್ಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಯೋಗ ನಡಿಗೆ  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶ್ರೀಯಾನ್ ಎನ್‌ವಿಷನ್ಸ್ ಮತ್ತು ವಿಜಯ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ನಡಿಗೆಯಲ್ಲಿ ಯೋಗ ಗುರು ಡಾ.ಕೆ.ರಾಘವೇಂದ್ರ ಪೈ ಅವರು ಸಂಚಾರ ಪೊಲೀಸರಿಗೆ ಯೋಗ ನಡಿಗೆಯನ್ನು  ಹೇಳಿಕೊಟ್ಟರು.

ಡಿಸಿಪಿ (ಅಪರಾಧ ಮತ್ತು ಕಾನೂನು) ಪಿ.ರಾಜೇಂದ್ರ ಪ್ರಸಾದ್, ಎಸಿಪಿ (ಸಂಚಾರ) ಶಂಕರೇಗೌಡ ಅವರು ಸೇರಿದಂತೆ ಸುಮಾರು ನಗರದ ವಿವಿಧ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್, ಎಸ್‌ಐ, ಎಎಸ್‌ಐ ಸೇರಿದಂತೆ ಸುಮಾರು 400 ಮಂದಿ ಯೋಗ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.