ADVERTISEMENT

ಪ್ರತಿ ಜಿಲ್ಲೆಗೆ 1000 ಹೊಲಿಗೆ ಯಂತ್ರ, 500 ಕಂಪ್ಯೂಟರ್: ರಘು ಕೌಟಿಲ್ಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 7:58 IST
Last Updated 5 ಜೂನ್ 2021, 7:58 IST

ಮೈಸೂರು: ‘ಕೋವಿಡ್‌ನಿಂದ ಉದ್ಯೋಗ ಕಳೆದುಕೊಂಡವರಿಗೆ ನೆರವಾಗುವ ಉದ್ದೇಶದಿಂದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ವತಿಯಿಂದ ಪ್ರತಿ ಜಿಲ್ಲೆಗೆ ತಲಾ 1000 ಹೊಲಿಗೆ ಯಂತ್ರಗಳು ಹಾಗೂ 500 ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡಲಾಗುವುದು’ ಎಂದು ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ಹೇಳಿದರು.

‘ಈ ಕುರಿತ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗಿದ್ದು, ಅವರು ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಸರ್ಕಾರಿ ಆದೇಶ ಹೊರಬೀಳಲಿದೆ. ದೇವರಾಜ ಅರಸು ಅವರ 39ನೇ ಪುಣ್ಯಸ್ಮರಣೆ ಅಂಗವಾಗಿ ನಿಗಮದ ವತಿಯಿಂದ ಈ ಯೋಜನೆ ಜಾರಿಯಾಗಲಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಯೋಜನೆಯ ಫಲಾನುಭವಿಗಳನ್ನು ಗುರುತಿಸುವಾಗ ಕೋವಿಡ್‌ ಕಾರಣದಿಂದ ಉದ್ಯೋಗ ಕಳೆದುಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ. ನಿಗಮದ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಿಂದುಳಿದ ವರ್ಗಗಳ ಜನರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆರ್ಥಿಕವಾಗಿ ಹಿಂದುಳಿದ ಇತರ ವರ್ಗಗಳ ಜನರು ಅರ್ಜಿ ಸಲ್ಲಿಸಿದರೂ, ಪರಿಗಣಿಸುತ್ತೇವೆ’ ಎಂದರು.

ADVERTISEMENT

‘ಹೊಲಿಗೆ ಯಂತ್ರ ಉಚಿತವಾಗಿ ವಿತರಿಸುವ ಜತೆಗೆ, ಟೈಲರಿಂಗ್‌ ಅಂಗಡಿ ಆರಂಭಿಸಲು ಅಗತ್ಯವಿರುವ ಇತರ ಪರಿಕರಗಳನ್ನು ನೀಡುವ ಚಿಂತನೆ ಮಾಡಲಾಗಿದೆ. ಉದ್ಯೋಗ ಕಳೆದುಕೊಂಡ ವಿದ್ಯಾವಂತರನ್ನು ಗುರುತಿಸಿ ಕಂಪ್ಯೂಟರ್‌ಗಳನ್ನು ನೀಡಲು ಉದ್ದೇಶಿಸಲಾಗಿದೆ. ಜನರಿಗೆ ತಾತ್ಕಾಲಿಕ ಪರಿಹಾರ ನಿಡುವ ಬದಲು, ಅವರ ಬದುಕು ರೂಪಿಸುವುದು ನಿಗಮದ ಗುರಿ’ ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಿಗಳಿಗೆ ನಿಗಮದ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ₹ 5 ರಿಂದ ₹ 10 ಸಾವಿರದವರೆಗೆ ಸಾಲ ನೀಡಲಾಗುತ್ತಿದ್ದು, ಲಾಕ್‌ಡೌನ್‌ ಬಳಿಕ ಈ ಯೋಜನೆಯನ್ನು ವ್ಯಾಪಕ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.