ಮೈಸೂರು: ‘ಕೊರೊನಾ ಸೋಂಕು ಬಹಳ ವೇಗವಾಗಿ ಹರಡುತ್ತಿದ್ದು, ಯುದ್ಧದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ರಾಜಕಾರಣ ಮಾಡುವ ಸಮಯ ಅಲ್ಲ. ಪಕ್ಷಾತೀತವಾಗಿ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುರುವಾರ ಇಲ್ಲಿ ಮನವಿ ಮಾಡಿದರು.
‘ಹಿಂದಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೆ ಬಹಳ ವ್ಯತ್ಯಾಸವಿದೆ. ಸೋಂಕು ಹಿಂದಿಗಿಂತ ನಾಲ್ಕು ಪಟ್ಟು ವೇಗವಾಗಿ ಹರಡುತ್ತಿದೆ. ಯಾರೂ ಇದನ್ನು ಊಹೆ ಮಾಡಿರಲಿಲ್ಲ. ‘ಕೊರೊನಾದಿಂದ ಬಡವರು, ಶ್ರೀಮಂತರು ಎಲ್ಲರೂ ಸಮಸ್ಯೆ ಎದುರಿಸುತ್ತಿದ್ದಾರೆ.ಈ ಸೋಂಕು ಯಾರನ್ನೂ ಬಿಡುತ್ತಿಲ್ಲ. ಹೀಗಾಗಿ, ಎಲ್ಲಾ ಪಕ್ಷದವರು ಸಹಕಾರ ನೀಡಬೇಕು’ ಎಂದು ಕೋರಿದರು.
‘ಮುಖ್ಯಮಂತ್ರಿ ಕಚೇರಿ ವಾರ್ ರೂಂ ರೀತಿ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರು ಹಗಲು ರಾತ್ರಿ ಇಡೀ ರಾಜ್ಯದ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಸಚಿವರ ಕೋರಿಕೆ ಮೇರೆಗೆ ಎರಡು ದಿನಗಳ ಹಿಂದೆ ಮೈಸೂರಿಗೆ ಒಂದು ಸಾವಿರ ರೆಮ್ಡಿಸಿವಿರ್ ಕಳುಹಿಸಿದ್ದಾರೆ. ದೊಡ್ಡ ಸವಾಲು ನಮ್ಮ ಮುಂದಿದೆ. ಆ ಸವಾಲನ್ನು ಎದುರಿಸುವ ಶಕ್ತಿ ಬಿಜೆಪಿ ಸರ್ಕಾರಕ್ಕೆ ಇದೆ’ ಎಂದರು.
ವಿಜಯೇಂದ್ರ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಪ್ರತಾಪಸಿಂಹ ಜೊತೆಗೂಡಿ ಜಿಲ್ಲಾಸ್ಪತ್ರೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಮಾಡಿರುವ ವ್ಯವಸ್ಥೆಯನ್ನು ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.