
ಶಂಕರಾಚಾರ್ಯ ರಚಿತ ಸ್ತೋತ್ರ ಪಠಣ | ‘ಅದ್ವೈತ’ ಸಾಕ್ಷಾತ್ಕಾರದ ಸಾಧನಾ ಮಾರ್ಗ | ವಿಧುಶೇಖರ ಭಾರತೀ ಸ್ವಾಮೀಜಿ ಸಾನಿಧ್ಯ
ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಯ ಜಗಮಗಿಸುವ ಬೆಳಕಿನ ವೇದಿಕೆ ಎದುರು ಸಾವಿರಾರು ಭಕ್ತರು ‘ಸ್ತುತಿ ಶಂಕರ’ ಸ್ತೋತ್ರ ಪಠಿಸಿ, ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ವೈಭವಕ್ಕೆ ಸಾಕ್ಷಿಯಾದರು.
ನಾಡಿನ ವಿವಿಧ ಮೂಲೆಗಳಿಂದ ಬಂದಿದ್ದ ಭಕ್ತರು, ಶನಿವಾರ ಆದಿ ಶಂಕರಾಚಾರ್ಯರು ರಚಿಸಿದ ‘ಕಲ್ಯಾಣವೃಷ್ಟಿಸ್ತವ’, ‘ಶಿವಪಂಚಾಕ್ಷರ ನಕ್ಷತಮಾಲಾ ಸ್ತೋತ್ರ’ ಹಾಗೂ ‘ಲಕ್ಷ್ಮಿನೃಸಿಂಹಕರುಣಾರಸ ಸ್ತೋತ್ರ’ವನ್ನು ಏಕಕಂಠದಲ್ಲಿ ಸುಶ್ರಾವ್ಯವಾಗಿ ವಾಚಿಸಿ ಭಕ್ತಿಯ ನುಡಿ ಬೆಳಕನ್ನು ಹರಿಸಿದರು.
ಶೃಂಗೇರಿ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೇದಘೋಷ ಮತ್ತು ವಾಗ್ದೇವಿ ಸ್ತುತಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ವರ್ಷವಿಡೀ ಮನೆಯಲ್ಲಿ ಭಕ್ತಿಯಿಂದ ಅಭ್ಯಾಸ ಮಾಡಿದ್ದ ಶಂಕರಾಚಾರ್ಯರ ಸ್ತೋತ್ರಗಳನ್ನು ಹೇಳುವಾಗ, ಭಕ್ತಿಭಾವ ಸಂಚಾರದ ದಿವ್ಯಾನುಭೂತಿ ಪಡೆದರು.
ವಿಧುಶೇಖರ ಭಾರತೀ ಸ್ವಾಮೀಜಿ ಮಾತನಾಡಿ, ‘ಸ್ತೋತ್ರಗಳಿಗೆ ಅಪಾರ ಮಹಿಮೆಯಿದ್ದು, ಆರಾಧ್ಯ ದೇವರ ಜೊತೆ ಮಾತನಾಡುವ ಭಾಷೆಯಾಗಿದೆ. ಸನಾತನ ಹಿಂದೂ ಧರ್ಮದ ಉದ್ಧಾರಕರಾದ ಆದಿಶಂಕರಾಚಾರ್ಯರು ದೇವರೊಂದಿಗೆ ಮಾತನಾಡಲು ಜನರಿಗೆ ನೀಡಿದ ಭಾಷೆಯೇ ಸ್ತೋತ್ರಗಳಾಗಿವೆ. ಅದ್ವೈತ ಸಿದ್ಧಾಂತ ಸಾಕ್ಷಾತ್ಕಾರ ಮಾಡಿಕೊಳ್ಳುವ ಸಾಧನಾ ಮಾರ್ಗವಾಗಿವೆ’ ಎಂದರು.
ಕೃಷ್ಣರಾಜನಗರದ ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರಭಾರತೀ ಸ್ವಾಮೀಜಿ ಮಾತನಾಡಿದರು.
ಬ್ರಹ್ಮಾನಂದ ಭಾರತೀ ಸ್ವಾಮೀಜಿ, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ಕೆಪಿಸಿಸಿ ಸದಸ್ಯ ಎಚ್.ವಿ.ರಾಜೀವ್, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು (ಕೌಟಿಲ್ಯ) ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.