ಮೈಸೂರು: ಎರಡು ತಿಂಗಳು ಕಳೆದರೂ ಸರ್ಕಾರ ಬೇಡಿಕೆ ಈಡೇರಿಸುವ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಮತ್ತೆ ಸೆ.21ರಿಂದ ರಾಜ್ಯದೆಲ್ಲೆಡೆ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ನ (ಎಐಯುಟಿಯುಸಿ) ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ ತಿಳಿಸಿದರು.
‘ಹಣ ಇಲ್ಲ ಎಂದರೆ ಸರ್ಕಾರ ನೇರವಾಗಿಯೇ ಹೇಳಲಿ. ನಾವು ಸುಮ್ಮನಿರಲು ಸಿದ್ಧ. ಆದರೆ, ಬೇಡಿಕೆ ಈಡೇರಿಸುವ ಭರವಸೆಯನ್ನು ಸ್ವತಃ ಮುಖ್ಯಮಂತ್ರಿಯೇ ನೀಡಿ 2 ತಿಂಗಳಾದರೂ ಬೇಡಿಕೆ ಈಡೇರದೇ ಹೋದರೆ ಕೊಟ್ಟ ಮಾತಿಗೆ ತಪ್ಪಿದ ಸರ್ಕಾರ ಎಂದು ಕರೆಯದೇ ಬೇರೆ ವಿಧಿ ಇಲ್ಲ’ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ವಿಧಾನಸಭಾ ಅಧಿವೇಶನ ನಡೆಯುವಷ್ಟೂ ದಿನ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಒಂದು ವೇಳೆ ಇದಕ್ಕೂ ಬೇಡಿಕೆ ಈಡೇರದೇ ಹೋದರೆ ಎಲ್ಲ ಆಶಾ ಕಾರ್ಯಕರ್ತೆಯರು ಬೆಂಗಳೂರಿಗೆ ಬಂದು ಒಗ್ಗಟ್ಟಾಗಿ ಪ್ರತಿಭಟನೆ ನಡೆಸುವರು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಸಮಿತಿ ಸದಸ್ಯೆ ಪಿ.ಎಸ್.ಸಂಧ್ಯಾ ಮಾತನಾಡಿ, ‘ಸರ್ಕಾರ ನೀಡಿದ ಭರವಸೆಯಂತೆ ₹12 ಸಾವಿರ ಮಾಸಿಕ ವೇತನ ನೀಡಬೇಕು. ಬಾಕಿ ಇರುವ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು. ಈಗಾಗಲೇ ಘೋಷಿಸಿದ ₹3 ಸಾವಿರ ಕೋವಿಡ್ ಪ್ರೋತ್ಸಾಹಧನವನ್ನು ಇನ್ನೂ ತಲುಪದೇ ಇರುವ ಆಶಾಗಳಿಗೆ ಪಾವತಿಸಬೇಕು’ ಎಂದು ಆಗ್ರಹಿಸಿದರು.
ನಗರ ಘಟಕದ ಕಾರ್ಯದರ್ಶಿ ಸುನೀತಾ ಮಾತನಾಡಿ, ‘ಆಶಾ ಕಾರ್ಯಕರ್ತೆಯರನ್ನು ಸರ್ಕಾರ ನಿಕೃಷ್ಟವಾಗಿ ಕಾಣುತ್ತಿದೆ. ಹೆಚ್ಚಿನ ಕೆಲಸಗಳನ್ನು ನೀಡುತ್ತಿದೆ. ನಮಗೆ ಸೂಕ್ತವಾದ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಶುಭಮಂಗಳಾ, ಶೋಭಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.