ADVERTISEMENT

ಎಚ್.ಡಿ.ಕೋಟೆ | ಅವಧಿ ಮೀರಿದ ಆಹಾರ ಮಾರಾಟ ಪತ್ತೆ: ನೋಟಿಸ್‌ ಜಾರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 14:25 IST
Last Updated 22 ಫೆಬ್ರುವರಿ 2024, 14:25 IST
ಎಚ್‌ಡಿ ಕೋಟೆ ತಾಲ್ಲೂಕು ಆಹಾರ ಸಂರಕ್ಷಣಾಧಿಕಾರಿ ಡಾ.ಟಿ.ರವಿಕುಮಾರ್ ಇಲಾಖೆಯ ರವಿರಾಜ್, ಪ್ರತಾಪ್ ಜೊತೆಗೂಡಿ ಬೇಕರಿ ಹಾಗೂ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು
ಎಚ್‌ಡಿ ಕೋಟೆ ತಾಲ್ಲೂಕು ಆಹಾರ ಸಂರಕ್ಷಣಾಧಿಕಾರಿ ಡಾ.ಟಿ.ರವಿಕುಮಾರ್ ಇಲಾಖೆಯ ರವಿರಾಜ್, ಪ್ರತಾಪ್ ಜೊತೆಗೂಡಿ ಬೇಕರಿ ಹಾಗೂ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು   

ಎಚ್.ಡಿ.ಕೋಟೆ: ಪಟ್ಟಣದ ಬೇಕರಿಯೊಂದರಲ್ಲಿ ಅವಧಿ ಮೀರಿದ ತಂಪು ಪಾನೀಯ ಮಾರಾಟ ಮಾಡಿರುವುದಾಗಿ ಗ್ರಾಹಕರೊಬ್ಬರು ನೀಡಿದ ದೂರಿನ ಮೇರೆಗೆ ತಾಲ್ಲೂಕು ಆಹಾರ ಸಂರಕ್ಷಣಾಧಿಕಾರಿ ಡಾ.ಟಿ.ರವಿಕುಮಾರ್ ಇಲಾಖೆಯ ರವಿರಾಜ್, ಪ್ರತಾಪ್ ಜೊತೆಗೂಡಿ ಬೇಕರಿ ಹಾಗೂ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಗುರುವಾರ ಪರಿಶೀಲನೆ ನಡೆಸಿದರು.

ಪರಿಶೀಲನೆ ಸಂದರ್ಭದಲ್ಲಿ ಬೇಕರಿಗಳಲ್ಲಿ ತಂಪು ಪಾನಿಯ ಸೇರಿದಂತೆ ನಿತ್ಯ ಸೇವನೆಯ ಆಹಾರ ತಯಾರಿಸಿ ಪ್ಯಾಕೇಟ್ ಮೇಲೆ ತಯಾರಿಸಿದ ದಿನಾಂಕ ಹಾಗೂ ಅವಧಿ ಮುಗಿಯುವ ದಿನಾಂಕ ನಮೂದಿಸದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಂಗಡಿಗಳ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ದಂಡ ವಿಧಿಸಿದರು.

ಅಂಗಡಿಗಳ ಮಾಲೀಕರು ಗ್ರಾಹಕರಿಗೆ ಉತ್ತಮ ತಂಪುಪಾನೀಯ ಹಾಗೂ ಶುದ್ಧ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬೇಕು. ತಯಾರಿಸಿದ ತಿಂಡಿ ತಿನಿಸುಗಳ ಪ್ಯಾಕೇಟ್‌ಗಳ ಮೇಲೆ ಅವಧಿ ನಮೂದಿಸಬೇಕು. ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಅಂಗಡಿಗಳಲ್ಲಿ ಇರಿಸಿಕೊಳ್ಳುವುದು ಹಾಗೂ ಮಾರಾಟ ಮಾಡುವುದು ಅಪರಾಧ ಎಂದು ಎಚ್ಚರಿಸಿದರು. ಎಲ್ಲಾ ಅಂಗಡಿಗಳು ಹಾಗೂ ಬೇಕರಿಗಳ ಮಾಲೀಕರು ಕಡ್ಡಾಯವಾಗಿ ಆಹಾರ ಪರವಾನಗಿ ಹೊಂದಿರಬೇಕು ಎಂದರು.

ADVERTISEMENT

ಸರ್ಕಾರದ ನಿಯಮದಂತೆ ಕಾನೂನು ಬಾಹಿರವಾಗಿ ಶಾಲಾ ಕಾಲೇಜುಗಳು ಸೇರಿದಂತೆ ಇಂತಿಷ್ಟು ಪ್ರದೇಶಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡಬಾರದೆಂಬ ನಿಯಮ ಇದೆ. ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.