ಮೈಸೂರು: ವಿದ್ಯುತ್ ದೀಪಗಳಿಂದ ಕಂಗೊಳಿಸುವ ನಗರದ ಸೌಂದರ್ಯ ಸವಿಯಲು ಪ್ರವಾಸಿಗರು ‘ಅಂಬಾರಿ’ ಬಸ್ಗೆ ಆದ್ಯತೆ ನೀಡಿದ್ದು, ಕಳೆದ ವರ್ಷಕ್ಕಿಂತ ಹೆಚ್ಚು ಜನ ಪ್ರಯೋಜನ ಪಡೆದಿದ್ದಾರೆ.
ಯುವ ದಸರಾ, ಯುವ ಸಂಭ್ರಮ, ಆಹಾರ ಮೇಳಗಳಂತೆ ಅಂಬಾರಿ ಬಸ್ನಲ್ಲಿ ತೆರಳುವ ಕ್ರೇಜ್ ಜನರಲ್ಲಿ ಹೆಚ್ಚಿದ್ದು, ಹೊರರಾಜ್ಯಗಳಿಂದ ಬಂದ ಜನರು ನಗರ ಪ್ರದಕ್ಷಿಣೆಗೆ ಅಂಬಾರಿ ಬಸ್ ಆಯ್ಕೆ ಮಾಡಿದ್ದಾರೆ. ದಸರಾ ದಿನಗಳಲ್ಲೇ 7 ರಿಂದ 8 ಸಾವಿರ ಜನರು ಪ್ರಯಾಣ ಮಾಡಿದ್ದು, ಅ.10ರವರೆಗೂ ಬುಕಿಂಗ್ ಆಗಿದೆ.
ಹೋಟೆಲ್ ಮಯೂರ ಹೊಯ್ಸಳದಿಂದ ಆರಂಭವಾಗುತ್ತಿದ್ದ ಪ್ರಯಾಣವು ಹಳೇ ಡಿಸಿ ಕಚೇರಿ, ಮೈಸೂರು ವಿ.ವಿ. ಕ್ರಾಫರ್ಡ್ ಭವನ, ಓರಿಯೆಂಟಲ್ ಕೇಂದ್ರ ಗ್ರಂಥಾಲಯ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲೆ, ಅರಮನೆ ದಕ್ಷಿಣ ದ್ವಾರ, ಜಯಮಾರ್ತಾಂಡ ಗೇಟ್, ಹಾರ್ಡಿಂಜ್ ಸರ್ಕಲ್, ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೈದ್ಯಕೀಯ ಆಸ್ಪತ್ರೆ, ರೈಲ್ವೆ ನಿಲ್ದಾಣ ರಸ್ತೆ ಮೂಲಕ ಹೋಟೆಲ್ ಮಯೂರ ಹೊಯ್ಸಳಕ್ಕೆ ವಾಪಸ್ ಆಗುತ್ತಿದೆ.
ನಗರದಲ್ಲಿ ಈ ಬಾರಿ ಐದು ‘ಅಂಬಾರಿ’ ಬಸ್ಗಳು ಓಡಾಟ ನಡೆಸಿದ್ದವು. ಸರಾಸರಿ ಒಂದು ಗಂಟೆಯ ಪ್ರಯಾಣದ ಅನುಭವ ಪಡೆದು ಪ್ರಯಾಣಿಕರೂ ಸಂತಸಪಟ್ಟಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ರಾಜ್ಯದ ಬೆಂಗಳೂರು, ಕರಾವಳಿ ಭಾಗದ ಪ್ರಯಾಣಿಕರು ಬಸ್ ಸೇವೆಯನ್ನು ಹೆಚ್ಚಾಗಿ ಬಳಸಿಕೊಂಡಿದ್ದಾರೆ.
‘ದೀಪಾಲಂಕಾರ ವೀಕ್ಷಿಸಲು ಅಂಬಾರಿ ಬಳಸುವವರ ಸಂಖ್ಯೆ ಈ ಬಾರಿ, ಕಳೆದ ವರ್ಷಕ್ಕಿಂತ ಹೆಚ್ಚಿದೆ. ಡಬ್ಬಲ್ ಡೆಕ್ಕರ್ ಬಸ್ನ ಮೇಲ್ಬಾಗದಲ್ಲಿ ತೆರೆದ ಮಾದರಿ ಡೆಕ್ನಲ್ಲಿ ಕುಳಿತು ನಗರದ ಸೌಂದರ್ಯ ವೀಕ್ಷಿಸಿ ಪ್ರವಾಸಿಗರೂ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ’ ಎಂದು ಎಸ್ಟಿಡಿಸಿ ಮೈಸೂರು ಸಾರಿಗೆ ವಿಭಾಗದ ವ್ಯವಸ್ಥಾಪಕ ಕೆ.ಆರ್. ಮಧುರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.