
ಮೈಸೂರು: ‘ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಸೂಕ್ತ ನಿಯಮ ರೂಪಿಸಬೇಕು’ ಎಂದು ಎಸ್ಡಿಎಂ ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಡಾ.ಪ್ರಸನ್ನ ಎನ್.ರಾವ್ ಹೇಳಿದರು.
ಚಾಮುಂಡಿ ಬೆಟ್ಟ ರಸ್ತೆಯ ಎಸ್ಡಿಎಂ ಐಎಂಡಿ ಆವರಣದಲ್ಲಿ ‘ಕಾವೇರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ’ಯು ‘ಆಹಾರ ಪದ್ಧತಿ, ಜೀವನಶೈಲಿ ಮತ್ತು ಸುಸ್ಥಿರ ಆರೋಗ್ಯ’ ಕುರಿತು ಆಯೋಜಿಸಿರುವ 2 ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು.
‘ಕೇಂದ್ರವು 1970ರಲ್ಲಿ ಶಲ್ಯ, ಶಾಲಾಖ್ಯ ಮತ್ತು ಪ್ರಸೂತಿ ತಂತ್ರದಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಆಯುರ್ವೇದ ವೈದ್ಯರಿಗೆ ಅವಕಾಶ ನೀಡಿದೆ. ಆಯುರ್ವೇದ ವೈದ್ಯರು ಸಂಘಟಿತರಾಗಿ ರಾಜ್ಯದಲ್ಲಿಯೂ ಅನುಮತಿ ಪಡೆಯಲು ಮುಂದಾಗಬೇಕು. ಜನಪ್ರತಿನಿಧಿಗಳು ಸಹಕರಿಸಬೇಕು’ ಎಂದರು.
‘ಕೇಂದ್ರವು ಆಯುಷ್ ವಿಸಾ ತಂದಿದ್ದು, ಅವಕಾಶವುಳ್ಳ ದೇಶಗಳಲ್ಲಿ ವೈದ್ಯರು ಸೇವೆ ನೀಡಬಹುದು. ಸ್ವಂತ ಆಸ್ಪತ್ರೆ ತೆರೆಯಲು ಕೆಲವು ಯೋಜನೆಗಳಿವೆ. ಈ ಎಲ್ಲಾ ಸೌಲಭ್ಯ
ವನ್ನು ಬಳಸಿಕೊಳ್ಳಬೇಕು’ ಎಂದರು.
ಆಯುಷ್ ಇಲಾಖೆ ಮಾಜಿ ವಿಶೇಷ ಅಧಿಕಾರಿ ಡಾ.ಎನ್.ಆಂಜನೇಯ ಮೂರ್ತಿ ಅವರಿಗೆ ‘ಕಾವೇರಿ ಆಯುರ್ವೇದ ಗುರು ತಿಲಕ’ ಹಾಗೂ ಶಿರಸಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಕೀಯ ಅಧಿಕಾರಿ ಜಗದೀಶ್ ವಿಷ್ಣುಯಾಜಿ ಅವರಿಗೆ ‘ಕಾವೇರಿ ಆಯುರ್ವೇದ ವೈದ್ಯ ಶ್ರೇಷ್ಠ’ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು.
ಶಾಸಕ ಟಿ.ಎಸ್.ಶ್ರೀವತ್ಸ, ಇಂಗ್ಲೆಂಡ್ನ ಆಯುರ್ವೇದ ಶಿಕ್ಷಣ ತಜ್ಞ ವಿಜಯೇಂದ್ರ ಎಸ್.ಮೂರ್ತಿ ಮಾತನಾಡಿದರು. ಕಾವೇರಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಜಿ.ಆರ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಕಾವೇರಿ ಸಮೂಹ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಡಾ.ಸರಳಾ ಚಂದ್ರಶೇಖರ್, ಮಂಡ್ಯದ ಮಹಾರಾಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಜಿ.ನರೇಶ್ ಕುಮಾರ್, ಎಸ್ಡಿಎಂ ಐಎಂಡಿ ನಿರ್ದೇಶಕ ಡಾ.ಎಸ್.ಎನ್.ಪ್ರಸಾದ್, ಕಾವೇರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ದೇಶಕ ಡಾ.ಎನ್.ಕೃಷ್ಣಪ್ರಸಾದ್, ಪ್ರಾಂಶುಪಾಲ ರಾಮಚಂದ್ರ ಎಸ್.ಎನ್, ಕಾವೇರಿ ಆಯುರ್ವೇದ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ವಿ.ಪೂರ್ಣಿಮಾ, ಮಂಡ್ಯದ ಮಹಾರಾಜ ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಆಸ್ಪತ್ರೆ ಪ್ರಾಂಶುಪಾಲ ಡಾ.ಎನ್.ವಿ.ಕೃಷ್ಣಮೂರ್ತಿ, ವೈದ್ಯಕೀಯ ಅಧೀಕ್ಷಕ ಡಾ.ಆರ್.ಜಯರಾಜ್ ಪಾಲ್ಗೊಂಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.