ADVERTISEMENT

ಭಾರತ್‌ ಜೋಡೊ: ಬದನವಾಳು ಗ್ರಾಮದಲ್ಲಿ ಮಹಿಳೆಯರ ಸಂಕಷ್ಟ ಆಲಿಸಿದ ರಾಹುಲ್‌ ಗಾಂಧಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 13:10 IST
Last Updated 2 ಅಕ್ಟೋಬರ್ 2022, 13:10 IST
ರಾಹುಲ್ ಗಾಂಧಿ ಅವರು ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರೊಂದಿಗೆ ಸಂವಾದ ನಡೆಸಿ, ಅವರ ಸಂಕಷ್ಟವನ್ನು ಆಲಿಸಿದರು.
ರಾಹುಲ್ ಗಾಂಧಿ ಅವರು ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರೊಂದಿಗೆ ಸಂವಾದ ನಡೆಸಿ, ಅವರ ಸಂಕಷ್ಟವನ್ನು ಆಲಿಸಿದರು.   

ಬದನವಾಳು (ಮೈಸೂರು ಜಿಲ್ಲೆ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಲ್ಲಿನ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರೊಂದಿಗೆ ಭಾನುವಾರ ಸಂವಾದ ನಡೆಸಿ, ಅವರ ಸಂಕಷ್ಟವನ್ನು ಆಲಿಸಿದರು.

ಅಲ್ಲಿ ನಡೆಯವ ಕಾರ್ಯದ ಬಗ್ಗೆ ಮಾಹಿತಿ ಪಡೆದ ಅವರು, ಹತ್ತಿಯ ಕೊರತೆ ಕಾರಣದಿಂದ ಕೇಂದ್ರದಲ್ಲಿ ಕೆಲಸ ಕಳೆದುಕೊಂಡಿರುವ 40 ಮಹಿಳೆಯರ ಬವಣೆಯನ್ನು ಸಹನೆಯಿಂದ ಅಲಿಸಿದರು.

‘ನೂಲುವುದು ಹೇಗೆ, ಕೈಯಲ್ಲಿ ಮಾಡುತ್ತೀರೋ, ಯಂತ್ರದಲ್ಲೋ, ದಾರದಲ್ಲಿ ಎಷ್ಟು ಮೀಟರ್ ಬಟ್ಟೆ ಮಾಡಬಹುದು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ‘ಇದರಿಂದ ಎಷ್ಟು ಗಳಿಸುತ್ತೀರಿ’ ಎಂಬ ಪ್ರಶ್ನೆಯನ್ನೂ ಹಾಕಿದರು. ಕನ್ನಡಕ್ಕೆ ಅನುದಾನ ಮಾಡುತ್ತಿದ್ದ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಂವಹನಕ್ಕೆ ಸಹಕರಿಸಿದರು.

ADVERTISEMENT

‘ಇವರಿಗೆ ಕೆಲಸಕ್ಕೆ ತಕ್ಕಂತೆ ಗಳಿಕೆ ಸಿಗುತ್ತಿಲ್ಲ. ಸರ್ಕಾರವು ಹತ್ತಿಯನ್ನು ಸರಿಯಾಗಿ ಪೂರೈಸದಿದ್ದರಿಂದ ಕೆಲಸ ಕಡಿಮೆಯಾಗಿದೆ. ಪರಿಣಾಮ, ಬಹಳಷ್ಟು ಮಂದಿಗೆ ಕೆಲಸವೇ ಇಲ್ಲದಂತಾಗಿದೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದಕ್ಕೆ ದನಿಗೂಡಿಸಿದ ಮಹಿಳೆಯರು, ‘ಆರು ತಿಂಗಳಿಂದ ಕೆಲಸವಿದೆ ಜೀವನ ನಡೆಸುವುದೇ ಕಷ್ಟವಾಗಿದೆ. ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಮಹಿಳೆಯರು ಅಳಲು ತೋಡಿಕೊಂಡರು. ‘ನಮಗೆ ಕೂಡಲೇ ಕೆಲಸ ಕೊಡಿಸಿ’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌, ‘ಇನ್ನಾರು ತಿಂಗಳು ಕಾಯಿರಿ. ನಮ್ಮದೇ ಸರ್ಕಾರ ಬರುತ್ತದೆ. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ವೇತನ ಸಿಗುವಂತೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು. ಇದಕ್ಕೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ದನಿಗೂಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಇದ್ದರು.

‘ಕೇಂದ್ರದಲ್ಲಿ 50 ಮಂದಿ ಇದ್ದು, ಈಗ ಹತ್ತು ಮಂದಿಗಷ್ಟೆ ಕೆಲಸವಿದೆ. ನಮ್ಮ ನೋವು ಆಲಿಸಿದ ರಾಹುಲ್ ಸ್ಪಂದಿಸುವ ಭರವಸೆ ನೀಡಿದ್ದಾರೆ. ಎಲ್ಲರಿಗೂ ಕೊಟ್ಟಂತೆ ಇವರಿಗೂ ಮನವಿ ನೀಡಿದ್ದೇವೆ. ಏನಾಗುತ್ತದೆಯೋ ನೋಡಬೇಕು’ ಎಂದು ರತ್ನಮ್ಮ ಮತ್ತು ಸುಧಾಮಣಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.