ಮೈಸೂರು: ಇಲ್ಲಿನ ಗಾಯತ್ರಿಪುರಂ 2ನೇ ಹಂತದ ನಿವಾಸಿ ಹೇಮಾವತಿ (45) ಅವರು ಬುಧವಾರ ಸಂಜೆ 7.30ರ ಸಮಯದಲ್ಲಿ ಹಾಲು ತೆಗೆದುಕೊಂಡು ನಡೆದು ಬರುತ್ತಿರುವಾಗ ಎದುರಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಹೇಮಾವತಿ ಅವರ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರ ಕಳ್ಳರ ಪಾಲಾಗಿದೆ. ಈ ಕುರಿತು ನಜರ್ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಗಳ್ಳತನಕ್ಕೆ ಯತ್ನ: ಇದಕ್ಕೂ ಮುನ್ನ 7.15ರ ಸುಮಾರಿನಲ್ಲಿ ಉದಯಗಿರಿಯ 2ನೇ ಹಂತದಲ್ಲಿ ತಮ್ಮ ಮನೆಯ ಮುಂದೆ ನಿಂತಿದ್ದ 35 ವರ್ಷದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಲು ಕಳ್ಳರು ಯತ್ನಿಸಿದ್ದಾರೆ. ಆದರೆ, ಮಹಿಳೆಯು ಸರವನ್ನು ಬಲವಾಗಿ ಹಿಡಿದುಕೊಂಡಿದ್ದರಿಂದ ಸರ ಕಳ್ಳರ ಕೈ ಸೇರಿಲ್ಲ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಎರಡೂ ಕಡೆಯೂ ಕೃತ್ಯ ನಡೆಸಿರಬಹುದು. ಉದಯಗಿರಿಯಲ್ಲಿ ಯತ್ನಿಸಿದ ನಂತರ ಗಾಯತ್ರಿಪುರಂಗೆ ಹೋಗಿ ಸರಗಳ್ಳತನ ಮಾಡಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.