ಸಾಲಿಗ್ರಾಮ: ಪೋಷಕರು ತಮ್ಮ ಜವಾಬ್ದಾರಿಯನ್ನು ಮಾಡಿ ಮುಗಿಸುವ ಭರಾಟೆಯಲ್ಲಿ ನಿಗದಿತ ವಯಸ್ಸಿಗೂ ಮುನ್ನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರೆ ಅವರ ಭವಿಷ್ಯ ನಾಶವಾಗುತ್ತಿದೆ, ಪ್ರಜ್ಞಾವಂತ ಪೋಷಕರು ಅವಕಾಶ ಮಾಡಿಕೊಡಬಾರದು ಎಂದು ಸಾಲಿಗ್ರಾಮ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲೆ ಎಸ್.ಕೆ.ವತ್ಸಲಾ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಗ್ರಾಮ ಪಂಚಾಯಿತಿ, ಪೊಲೀಸ್ ಠಾಣೆ ಹಾಗೂ ಸರ್ಕಾರಿ ಪ್ರೌಢಶಾಲೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಯುಕ್ತವಾಗಿ ಆಯೋಜಿಸಿದ್ದ ‘ಬಾಲ್ಯವಿವಾಹ ನಿಷೇಧ ಜಾಗೃತಿ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ಕಾರ ನಿಗದಿಪಡಿಸಿರುವ ವಯಸ್ಸಿಗೆ ಹೆಣ್ಣು ಮಕ್ಕಳಿಗೆ ವಿವಾಹ ಮಾಡಬೇಕು. ಹಾಗೊಂದು ವೇಳೆ ಪೋಷಕರು ಉಡಾಫೆಯಿಂದ ಮದುವೆ ಮಾಡಲು ಮುಂದಾದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ಪೋಷಕರು ಬಲವಂತವಾಗಿ ಮದುವೆ ಮಾಡಲು ಮುಂದಾದರೆ ಯಾವುದೇ ಕಾರಣಕ್ಕೂ ಹೆದರದೆ ಹೆಣ್ಣು ಮಕ್ಕಳು ಧೈರ್ಯದಿಂದ ಸ್ಥಳೀಯ ಪೊಲೀಸ್ ಠಾಣೆ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಮುಂದಾಗಬೇಕು’ ಎಂದು ಹೇಳಿದರು.
‘ಸರ್ಕಾರ ನಿಗದಿಪಡಿಸಿರುವ ವಯೋಮಾನಕ್ಕೆ ತಕ್ಕಂತೆ ಮದುವೆ ಮಾಡಿದರೆ ಹೆಣ್ಣು ಮಕ್ಕಳು ಹಲವು ರೋಗಗಳಿಂದ ದೂರವಿದ್ದು, ಕುಟುಂಬದಲ್ಲಿ ನೆಮ್ಮದಿಯಿಂದ ಜೀವನ ನಡೆಸುವ ಜತೆಗೆ ಕುಟುಂಬದ ಸದಸ್ಯರನ್ನು ಆರೋಗ್ಯದಿಂದ ಇಟ್ಟುಕೊಳ್ಳಲು ಮುಂದಾಗುತ್ತಾಳೆ. ಇದನ್ನು ಪೋಷಕರು ಅರಿತುಕೊಳ್ಳುವ ಅಗತ್ಯವಿದೆ’ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಎಸಿಡಿಪಿಒ ಅಕ್ಕಮಹಾದೇವಿ, ಮೇಲ್ಪಿಚಾರಕಿ ಮಂಜುಳಾ, ಸಾಲಿಗ್ರಾಮ ಠಾಣೆ ಎಎಸ್ಐ ಜಯಪ್ರಕಾಶ್, ಆರೋಗ್ಯ ಇಲಾಖೆ ನೇತ್ರಾವತಿ, ಐಶ್ವರ್ಯ, ಅಂಗನವಾಡಿ ಶಿಕ್ಷಕಿಯರಾದ ಚಂದ್ರಿಕಾ, ಶಾಲಿನಿ, ಸವಿತಾ, ಸಾಲಿಗ್ರಾಮ ತಾಲ್ಲೂಕು ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಂಕನಹಳ್ಳಿ ಮಧುಕುಮಾರ್, ಶಿಕ್ಷಕ ಜಯಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.