ಮೈಸೂರು: ‘ಮೈಸೂರು ಜಿಲ್ಲೆಯ ಕೋವಿಡ್ ನಿರ್ವಹಣೆಗೆ ಮಾಡಿರುವ ಖರ್ಚಿನ ಬಗ್ಗೆ ಆಡಳಿತ ಪಕ್ಷದ ಶಾಸಕರು, ಸಂಸದರು, ಜಿಲ್ಲಾಧಿಕಾರಿಯೇ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದು, ಭ್ರಷ್ಟಾಚಾರದ ನಡೆದಿದೆ. ಈ ವಿಚಾರವಾಗಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಆರ್.ಧ್ರುವನಾರಾಯಣ ಆಗ್ರಹಿಸಿದರು.
‘ಎಸ್ಡಿಆರ್ಎಫ್ನಿಂದ ಮೈಸೂರು ಜಿಲ್ಲೆಗೆ ಬಂದ₹ 41 ಕೋಟಿ ಬಗ್ಗೆ ಲೆಕ್ಕ ಕೊಡಬೇಕು. ಯಾರಿಗೆ ಟೆಂಡರ್ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ಖಾಸಗಿ ಆಸ್ಪತ್ರೆಗಳಿಂದ ಸರ್ಕಾರ ಪಡೆದಿರುವ ಶೇ 50ರಷ್ಟು ಬೆಡ್ಗಳಲ್ಲಿ ಚಿಕಿತ್ಸೆ ಪಡೆದವರ ಪಟ್ಟಿಬಿಡುಗಡೆ ಮಾಡಬೇಕು.ಸ್ಟೆಪ್ಡೌನ್ ಆಸ್ಪತ್ರೆಗಳಿಂದ ಕಿಕ್ಬ್ಯಾಕ್ ಪಡೆದವರು ಯಾರು ಎಂಬುದು ಗೊತ್ತಾಗಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿಒತ್ತಾಯಿಸಿದರು.
‘ಪಿಎಂ ಕೇರ್ ನಿಧಿಯಿಂದ ಖರ್ಚು ಮಾಡಿದ ಹಣ ಎಷ್ಟು? ಪ್ರಧಾನಿ ಮೋದಿ ಘೋಷಿಸಿದ ₹ 20 ಲಕ್ಷ ಕೋಟಿ ಕೋವಿಡ್ ಪ್ಯಾಕೇಜ್ ಏನಾಯಿತು? ಇದರರಲ್ಲಿ ಕರ್ನಾಟಕಕ್ಕೆ ಬಂದ ಹಣವೆಷ್ಟು? ಜನರಿಗೆ ತಲುಪಿಸಿದ ಪರಿಹಾರವೆಷ್ಟು? ಕರ್ನಾಟಕಕ್ಕೆ ಬೇಕಾಗಿರುವ ಆಮ್ಲಜನಕ, ಲಸಿಕೆ ಎಷ್ಟು, ಬಂದಿದೆಷ್ಟು’ ಎಂದು ಸರಣಿ ಪ್ರಶ್ನೆ ಕೇಳಿದರು.
‘ಮೋದಿ, ಶಾಗೆ ಬಿಜೆಪಿಗರು ಗುಲಾಮರು’
‘ಕಾಂಗ್ರೆಸ್ಸಿನದ್ದು ಗುಲಾಮಗಿರಿ ಸಂಸ್ಕೃತಿ ಎಂಬುದಾಗಿ ಸಿ.ಟಿ.ರವಿ ಆರೋಪಿಸಿದ್ದಾರೆ. ಗುಲಾಮಗಿರಿ ಎಂಬುದು ಬಿಜೆಪಿ ಸಂಕೇತ. ಪಕ್ಷ ಬಿಜೆಪಿ; ಮುಖವಾಡ ಆರ್ಎಸ್ಎಸ್ನದ್ದು. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸುವ ಒಬ್ಬ ಬಿಜೆಪಿ ನಾಯಕ ಇಲ್ಲ. ಇವರೆಲ್ಲರೂ ಮೋದಿ, ಶಾಗೆ ಗುಲಾಮರಾಗಿದ್ದಾರೆ’ ಎಂದು ತಿರುಗೇಟು ನೀಡಿದರು.
‘ಸಿ.ಟಿ.ರವಿ ಹಾಗೂ ನಾನು ಒಟ್ಟಿಗೆ ಶಾಸಕರಾದೆವು. ಕ್ಷೇತ್ರಕ್ಕೆ ಕಾಲೇಜು ತರಿಸಲು ಪ್ರಯತ್ನಿಸುತ್ತಿದ್ದಾಗ, ‘ಅಭಿವೃದ್ಧಿಗಾಗಿ ಏಕೆ ಓಡಾಡುತ್ತೀಯಾ? ಅಭಿವೃದ್ಧಿಯನ್ನು ಜನ ನೋಡಲ್ಲ. ನಮ್ಮ ಕಡೆ ವರ್ಷಕೊಮ್ಮೆ ದತ್ತಪೀಠ ವಿಚಾರ ತೆಗೆದರೆ ಗೆಲ್ಲುತ್ತೇವೆ’ ಎಂಬುದಾಗಿ ರವಿ ಹೇಳುತ್ತಿದ್ದರು. ಬಿಜೆಪಿಯವರು ಭಾವನಾತ್ಮಕ ವಿಚಾರದ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.