ADVERTISEMENT

ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಸ್ವಾಮೀಜಿ ಆಪ್ತ ಸೇವಕನ ಬಂಧನ

ಸಾಲಿಗ್ರಾಮ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 14:04 IST
Last Updated 20 ಅಕ್ಟೋಬರ್ 2019, 14:04 IST
ಸಾಲಿಗ್ರಾಮ ಸಮೀಪ ಜಪದಕಟ್ಟೆ ದೇವಾಲಯದಲ್ಲಿ ಕಳ್ಳತನ ಮಾಡಿದ್ದ ಮಠದ ಸೇವಕ ಗುರುರಾಜನಿಂದ ವಶಪಡಿಸಿಕೊಂಡ ಚಿನ್ನ
ಸಾಲಿಗ್ರಾಮ ಸಮೀಪ ಜಪದಕಟ್ಟೆ ದೇವಾಲಯದಲ್ಲಿ ಕಳ್ಳತನ ಮಾಡಿದ್ದ ಮಠದ ಸೇವಕ ಗುರುರಾಜನಿಂದ ವಶಪಡಿಸಿಕೊಂಡ ಚಿನ್ನ   

ಸಾಲಿಗ್ರಾಮ: ಸಮೀಪದಯೋಗಾನಂದ ಸರಸ್ವತಿ ಮಠದ ಜಪದಕಟ್ಟೆ ದೇವಾಲಯಕ್ಕೆ ಸೇರಿದ ಸುಮಾರು ₹ 5.10 ಲಕ್ಷ ಬೆಲೆ ಬಾಳುವ ಚಿನ್ನದ ಆಭರಣಗಳ ಕಳವು ಪ್ರಕರಣವನ್ನು ಕೆ.ಆರ್.ನಗರ ಪೊಲೀಸರು ಭೇದಿಸಿದ್ದು, ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ.

ಯೋಗಾನಂದ ಸರಸ್ವತಿ ಮಠದ ಸ್ವಾಮೀಜಿಯ ಬಳಿ ಹಲವು ವರ್ಷಗಳಿಂದ ಸೇವಕನಾಗಿದ್ದ ಗುರುರಾಜ ಕುಲಕರ್ಣಿ ಎಂಬಾತನೇ ಕಳವು ಆರೋಪಿಯಾಗಿದ್ದಾನೆ.

ಕಲಬುರ್ಗಿ ಜಿಲ್ಲೆ ಬ್ರಹ್ಮಪುರ ಮೇಲಿನಕೇರಿ ಗ್ರಾಮದ ಗುರುರಾಜ ಅವರು ಅ.5 ರಂದು ಕಳ್ಳತನ ಮಾಡಿ ನಾಪತ್ತೆಯಾಗಿದ್ದರು. ಮಠದ ವತಿಯಿಂದಕೆ.ಆರ್.ನಗರ ಠಾಣೆಗೆ ದೂರು ನೀಡಲಾಗಿತ್ತು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಬಲೆ ಬೀಸಿ 143 ಗ್ರಾಂ ಚಿನ್ನಾಭರಣ ಸಹಿತ ಗುರುರಾಜನನ್ನು ಸೆರೆಹಿಡಿಯಲಾಗಿದೆ ಎಂದುಸಿಪಿಐ ಪಿ.ಕೆ. ರಾಜು ತಿಳಿಸಿದ್ದಾರೆ.

ADVERTISEMENT

ಜಪದಕಟ್ಟೆಯ ಶ್ರೀಚಕ್ರಕ್ಕೆ ಅಲಂಕರಿಸುವ 4 ಚಿನ್ನದ ನಕ್ಲೇಸ್, ಮುತ್ತಿನಸರ, ಅವಲಕ್ಕಿ ಸರ, ಚೈನ್ ಹಾಗೂ ಪದಕ, ಗೆಜ್ಜೆ ಮತ್ತು ಸರ ಸೇರಿದಂತೆ ಒಟ್ಟು 143 ಗ್ರಾಂ ಚಿನ್ನಾಭರಣ ಕಳ್ಳತನವಾಗಿತ್ತು. ಗುರುರಾಜನ ಮೇಲೆ ಸಂಶಯ ವ್ಯಕ್ತಪಡಿಸಿ ಪೊಲೀಸರು ಬಂಧಿಸಿದಾಗ ಸತ್ಯ ಗೊತ್ತಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಗಾಬರಿಗೊಂಡಿದ್ದಾರೆ.

ಕಳ್ಳನನ್ನು ಹಿಡಿದ ಪೊಲೀಸರಿಗೆ ಎಸ್‌.ಪಿ. ಸಿ.ಬಿ. ರಿಷ್ಯಂತ್‌ ಬಹುಮಾನ ಘೋಷಿಸಿದ್ದಾರೆ.

ಪ್ರಕರಣ ಭೇದಿಸಲು ಠಾಣೆಯ ಪಿಎಸ್‌ಐ ಮಾದಪ್ಪ, ಸಿಬ್ಬಂದಿಗಳಾದ ಪ್ರದೀಪ, ಮಹೇಶ್ ಹಾಗೂ ಕೃಷ್ಣ ಸಹಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.