
ಹುಣಸೂರು: ತಾಲ್ಲೂಕಿನ ಬಿಳಿಕೆರೆ ಹೋಬಳಿ ಹೊಸರಾಮೇನಹಳ್ಳಿಯಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ದಂಡಮ್ಮದೇವಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿತು.
ಶುಕ್ರವಾರ ರಾತ್ರಿ ಅದ್ಧೂರಿಯಿಂದ ನಡೆದ ಜಾತ್ರೆಯಲ್ಲಿ ಸುತ್ತಲಿನ 33 ಗ್ರಾಮಗಳ ನೆಂಟರು ಭಕ್ತರು ಒಳಗೂಡಿ ಆಚರಿಸಿದರು. ರಾತ್ರಿ ದಂಡಮ್ಮದೇವಿಗೆ ವಿಶೇಷ ಪೂಜಾ ಕೈಂಕರ್ಯ ನಡೆಸಿ ಕುರಿ, ಆಡು ಬಲಿ ನೀಡಿದ ಬಳಿಕ ಉತ್ಸವ ಜರುಗಿತು.
ಜಾತ್ರ ಮಹೋತ್ಸವದಲ್ಲಿ ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಭಾಗವಹಿಸಿ ದೇವರಿಗೆ ಪೂಜೆ ಅರ್ಪಿಸಿ ತೆರಳಿದರು.
ದಂಡಮ್ಮ ದೇವಿಗೆ ಭಕ್ತರು ಹೊತ್ತಿದ್ದ ಹರಕೆಯನ್ನು ಅರ್ಪಿಸಿದ ಬಳಿಕ ಬಾಡೂಟ ಸಿದ್ಧಪಡಿಸಿ ಅಹೋ ರಾತ್ರಿ ಭಕ್ತರಿಗೆ ಬಡಿಸಿದರು.
ಭತ್ತ ಸಂಗ್ರಹ
‘ದಂಡಮ್ಮ ದೇವಿಗೆ ಗ್ರಾಮದ ಸುತ್ತಲಿನ ಭತ್ತದ ಗದ್ದೆಯಲ್ಲಿ ಸಂಕ್ರಾಂತಿಯಿಂದ ಭತ್ತ ಸಂಗ್ರಹಿಸುವ ಕಾರ್ಯ ನಡೆಯಲಿದೆ. ಸಂಗ್ರಹಿಸಿದ ಭತ್ತವನ್ನು ಈ ಜಾತ್ರೆಗೆ ಆಗಮಿಸುವ ಭಕ್ತರಿಗೆ ದಾಸೋಹ ಏರ್ಪಡಿಸಿ ತೃಪ್ತಿಪಡಿಸಲಾಗುತ್ತದೆ’ ಎಂದು ಸ್ಥಳಿಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.