ADVERTISEMENT

ದಸರಾ 2022: ಮೃತ ಕವಿಯನ್ನು ಗೋಷ್ಠಿಗೆ ಆಹ್ವಾನಿಸಿದರೇ?

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 13:53 IST
Last Updated 27 ಸೆಪ್ಟೆಂಬರ್ 2022, 13:53 IST
ಆಹ್ವಾನ ಪತ್ರಿಕೆ
ಆಹ್ವಾನ ಪತ್ರಿಕೆ   

ಮೈಸೂರು: ನಗರದಲ್ಲಿ ಅ.3ರಂದು ನಡೆಯಲಿರುವ ದಸರಾ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವ ಕವಿಗಳ ಪಟ್ಟಿಯಲ್ಲಿ ದಿವಂಗತ ಕವಿ ಜಿ.ಕೆ.ರವೀಂದ್ರಕುಮಾರ್ ಅವರ ಹೆಸರು ಸೇರಿರುವುದಕ್ಕೆ ಲೇಖಕರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಟೀಕೆಗೂ ಒಳಗಾಗಿದೆ. ಆದರೆ, ಆಹ್ವಾನ ಪತ್ರಿಕೆಯಲ್ಲಿ ಈ ತಪ್ಪು ನುಸುಳಿಲ್ಲ.

ಕಳೆದ ಬಾರಿಯ ಕವಿಗೋಷ್ಠಿಯ ಟೆಂಪ್ಲೇಟ್ ಬಳಸಿ ಸಿದ್ಧಮಾಡಿದ ಕರಡು ಪ್ರತಿಯಲ್ಲಿ ರವೀಂದ್ರ ಕುಮಾರ್ ಹೆಸರಿತ್ತು. ಆದರೆ, ಅಂತಿಮವಾಗಿ ಮುದ್ರಣಗೊಂಡ ಆಹ್ವಾನ ಪತ್ರಿಕೆಯಲ್ಲಿ ಈ ಹೆಸರು ಇರಲಿಲ್ಲ. ಸರಿಯಾಗಿಯೇ ಇತ್ತು ಎಂದು ಉಪಸಮಿತಿ ಸ್ಪಷ್ಟನೆ ನೀಡಿದೆ.

ಇದಕ್ಕೆ ಮೊದಲು ಸಾಮಾಜಿಕ ಜಾಲತಾಣದಲ್ಲಿ ಆಹ್ವಾನದ ಕರಡು ಪ್ರತಿಯ ಚಿತ್ರಗಳು ಹರಿದಾಡಿ ಸಾಕಷ್ಟು ಚರ್ಚೆಗೆ, ಟೀಕೆಗೆ ಕಾರಣವಾಗಿತ್ತು. ‘ಜಿ.ಕೆ.ರವೀಂದ್ರಕುಮಾರ್‌ ಕನ್ನಡದ ಅತ್ಯುತ್ತಮ ಕವಿ. ಅವರು ಈಗಿಲ್ಲ. ಕಣ್ಮರೆ ಅದವರನ್ನು ಎಲ್ಲರೂ ಮರೆಯುತ್ತಾರೆ. ಆದರೆ, ಸರ್ಕಾರ ಮರೆಯುವುದಿಲ್ಲ! ದತ್ತಿ ಸಂಸ್ಥೆ ಸದಸ್ಯರನ್ನೂ ಮಾಡುತ್ತದೆ. ಕವಿಗೋಷ್ಠಿಗೂ ಕರೆಯುತ್ತದೆ!’ ಎಂದು ಅಣಕವಾಡಿದ್ದಾರೆ. ನಾಗರಾಜರಾವ್ ಕಲ್ಕಟ್ಟೆ ಅವರ ಹೆಸರನ್ನು ‘ಕಲ್ಕತ್ತೆ’ ಎಂದು ಪ್ರಕಟಿಸಿರುವುದಕ್ಕೂ ಆಕ್ಷೇಪ ವ್ಯಕ್ತವಾಗಿದೆ.

ADVERTISEMENT

ಯಡವಟ್ಟುಗಳ ಸರಮಾಲೆಯನ್ನೇ ಹೊಂದಿರುವ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸುವುದಿಲ್ಲ, ಬಹಿಷ್ಕರಿಸುತ್ತೇನೆ ಎಂದು ಕವಿ ವಿಜಯಕಾಂತ ಪಾಟೀಲ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಆಹ್ವಾನ ಪತ್ರಿಕೆಯಲ್ಲಿ, ಸಂಸದ ಪ್ರತಾಪ ಸಿಂಹ ಚಾಮರಾಜನಗರ ಕ್ಷೇತ್ರ ಎಂದು ಮುದ್ರಿಸಲಾಗಿದೆ! ಸೋಮುವಾರ (ಸೋಮವಾರ) ಎಂದಾಗಿದೆ. ಇದೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆಒಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.