ಮೈಸೂರು: 'ನಾನು ಮನಸ್ಸು ಮಾಡಿದರೆ ರಾಜ್ಯದ ಎಲ್ಲಿಯೂ ಬಿಜೆಪಿಯವರು ಕಾರ್ಯಕ್ರಮ ನಡೆಸಲು ಮತ್ತು ಫ್ಲೆಕ್ಸ್ ಹಾಕಲು ಬಿಡುವುದಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೊ ಪಾದಯಾತ್ರೆಗೆ ಸಂಬಂಧಿಸಿದ ಫ್ಲೆಕ್ಸ್ ಹಾಗೂ ಬ್ಯಾನರ್ ಹರಿದ ವಿಚಾರಕ್ಕೆ ಇಲ್ಲಿ ಪ್ರತಿಕ್ರಿಯೆ ನೀಡಿದ ಅವರು, 'ಬ್ಯಾನರ್, ಫ್ಲೆಕ್ಸ್ ಹರಿದು ಹಾಕುವುದನ್ನು ಒಳ್ಳೆಯ ಕೆಲಸ ಎಂದುಕೊಂಡಿದ್ದಾರೆ. ಚುಚ್ಚಿದರೂ, ಗುಂಡಿಕ್ಕಿದರೂ ಕಾಂಗ್ರೆಸ್ನವರು ಹೆದರುವುದಿಲ್ಲ' ಎಂದರು.
'ಅವರು ಹೇಳಿಕೊಡುತ್ತಿರುವ ಪಾಠವನ್ನು ಕಾಂಗ್ರೆಸ್ನವರು ಇನ್ನೂ ಚೆನ್ನಾಗಿಯೇ ಚೆನ್ನಾಗಿ ಕಲಿತಿದ್ದಾರೆ. ಮುಖ್ಯಮಂತ್ರಿ ಹಾಗೂ ಅವರ ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಫ್ಲೆಕ್ಸ್ ಹರಿದು ಹೇಡಿಗಳಂತೆ ಓಡಿ ಹೋದರೆ ಅದು ನಿಮಗೆ ಶೋಭೆ ತರುವುದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಮನೆ ಮೇಲೆ ಸಿಬಿಐ ಅಧಿಕಾರಿಗಳ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಏನ್ ಮಾಡ್ತಿರಾ? ಯಾರ ಮೇಲೆ ಪ್ರೀತಿ ಇರುತ್ತದೆಯೋ ಅವರ ಮನೆ ದಾಳಿ ಮಾಡುತ್ತಾರೆ. ನಾನು ಪಾದಯಾತ್ರೆ ಸಿದ್ಧತೆ ಕೆಲಸದಲ್ಲಿದ್ದೇನೆ. ಅವರು ಅಲ್ಲಿ ದಾಳಿ ಮಾಡಿದ್ದಾರೆ' ಎಂದರು.
'ಸಿಬಿಐ ಎಂದ ಕೂಡಲೇ ನಮ್ಮ ಜನ ಗಡಗಡ ಅಂತಾರೆ. ನಾವೂ ಗಡಗಡ ಅಂತೀವಿ' ಎಂದು ವ್ಯಂಗ್ಯವಾಗಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.