ADVERTISEMENT

ಖಾಸಗಿ ವ್ಯಕ್ತಿಯಿಂದ ತಂಬಾಕು ಬಿತ್ತನೆ ಬೀಜ ಖರೀದಿಸದಿರಿ: ಸಿಟಿಆರ್‌ಐ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:55 IST
Last Updated 1 ಜನವರಿ 2026, 6:55 IST
ಹುಣಸೂರು ನಗರದ ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರ ಅಭಿವೃದ್ಧಿಪಡಿಸಿದ ವಿವಿಧ ತಂಬಾಕು ತಳಿ ಬಿತ್ತನೆ ಬೀಜವನ್ನು ಕೇಂದ್ರದ ವಿಜ್ಞಾನಿ ಡಾ.ರಾಮಕೃಷ್ಣನ್‌ ಪ್ರದರ್ಶಿಸಿದರು
ಹುಣಸೂರು ನಗರದ ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರ ಅಭಿವೃದ್ಧಿಪಡಿಸಿದ ವಿವಿಧ ತಂಬಾಕು ತಳಿ ಬಿತ್ತನೆ ಬೀಜವನ್ನು ಕೇಂದ್ರದ ವಿಜ್ಞಾನಿ ಡಾ.ರಾಮಕೃಷ್ಣನ್‌ ಪ್ರದರ್ಶಿಸಿದರು   

ಹುಣಸೂರು: ಖಾಸಗಿ ವ್ಯಕ್ತಿಗಳು ಮಾರಾಟ ಮಾಡುವ ತಂಬಾಕು ಬಿತ್ತನೆ ಬೀಜಕ್ಕೆ ಯಾವುದೇ ರೀತಿಯ ಗುಣಮಟ್ಟದ ಖಾತ್ರಿ ಇರುವುದಿಲ್ಲ. ಹೀಗಾಗಿ ಆತುರದ ತೀರ್ಮಾನದಿಂದ ಹಣ ಕಳೆದುಕೊಳ್ಳದಿರಿ ಎಂದು ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ವಿಜ್ಞಾನಿ ಡಾ.ರಾಮಕೃಷ್ಣನ್‌ ಎಚ್ಚರಿಸಿದ್ದಾರೆ.

ತಂಬಾಕು ಬೆಳೆಯಲ್ಲಿ ಅನೇಕ ಸಂಶೋಧನೆ ನಡೆಸಿ ರೈತರ ಒಳತಿಗೆ ತಂಬಾಕು ಸಂಶೋಧನ ಕೇಂದ್ರ ಶ್ರಮಿಸಿದೆ. ಇತ್ತೀಚಿನ ದಿನದಲ್ಲಿ ಅನಧಿಕೃತವಾಗಿ ಬಿತ್ತನೆ ಬೀಜ ಮಾರಾಟ ಮಾಡಿ ರೈತರನ್ನು ಅಡ್ಡದಾರಿಗೆ ಎಳೆಯುವ ಪ್ರಯತ್ನ ನಡೆದಿದೆ. ಕೇಂದ್ರ ಅಭಿವೃದ್ಧಿಪಡಿಸಿದ ತಂಬಾಕು ಬಿತ್ತನೆ ಬೀಜವನ್ನು ಮುಂದಿನ ಸಾಲಿಗೆ ಬಳಸಲು ಸಿದ್ಧಗೊಳಿಸಿದೆ. ಜನವರಿ ಎರಡನೇ ವಾರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ರೈತರು ಖಾಸಗಿ ವ್ಯಕ್ತಿಗಳಿಂದ ತಂಬಾಕು ಬಿತ್ತನೆ ಬೀಜ ಖರೀದಿಸಿ ಮೋಸ ಹೋಗಬೇಡಿ ಎಂದು ಮನವಿ ಮಾಡಿದೆ.

ಖಾತ್ರಿ ಇಲ್ಲದೆ ಬಿತ್ತನೆ ಬೀಜ ಬಳಸಿ ಬೆಳೆದ ತಂಬಾಕಿನಲ್ಲಿ ಇಳುವರಿ ನಿರೀಕ್ಷಿಗೆ ತಕ್ಕಷ್ಟು ಇಲ್ಲದೆ ಗುಣಮಟ್ಟ ಕುಸಿತದಿಂದ ರೈತರು ಆರ್ಥಿಕವಾಗಿ ಕೈಸುಟ್ಟಿಕೊಳ್ಳುವ ಸಾಧ್ಯತೆ ಇದ್ದು, ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದ ಉತ್ತಮ ತಳಿಯನ್ನು ರೈತರಿಗೆ ವಿತರಿಸಲು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದರು.

ADVERTISEMENT

ಬಿತ್ತನೆ ಬೀಜ: ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿಪಡಿಸಿದ ತಳಿಗಳಾದ ಎಫ್.ಸಿ.ಎಚ್.‌ 222, ಎಫ್.ಸಿ.ಎಚ್ 248, ಕಾಂಚನ ಇದರೊಂದಿಗೆ ಸಿಎಚ್‌ 3 ಮತ್ತು 1353 ತಳಿ ಬಿತ್ತನೆ ಬೀಜ ಐಟಿಸಿ ಕಂಪನಿ ರೈತನಿಗೆ ನೀಡಲು ಸಿದ್ಧತೆ ಮಾಡಿಕೊಂಡಿದೆ ಎಂದರು.

ಎಚ್.ಸಿ.ಎಚ್.‌ 222 ತಳಿಗೆ ಕೊಳೆ ರೋಗ ನಿಯಂತ್ರಿಸುವ ಸಾಮರ್ಥ್ಯ ಇದೆ. ಎಫ್.ಸಿ.ಎಚ್ 248 ತಳಿ ಉತ್ತಮ ಗುಣಮಟ್ಟ ಮತ್ತು ಹೆಚ್ಚು ಇಳುವರಿ ಸಿಗಲಿದೆ ಮತ್ತು ಕಾಂಚನ ತಳಿ ಹೆಚ್ಚು ಇಳುವರಿ ಮತ್ತು ಹೆಚ್ಚು ಮಳೆ ಬಂದರು ಬದುಕುಳಿಯುವ ಸಾಮರ್ಥ್ಯ ಹೊಂದಿದೆ. ಈ ಎಲ್ಲವೂ ಹುಣಸೂರು ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರ ಅಭಿವೃದ್ಧಿಪಡಿಸಿ ರೈತರಿಗೆ ವಿತರಿಸಿದೆ. ಇದರ ಲಾಭವನ್ನು ಬೆಳೆಗಾರರು ಕಳೆದ ಸಾಲಿನಲ್ಲಿ ಪಡೆದಿದ್ದಾರೆ ಎಂದರು.

ವಾತಾವರಣ: ತಂಬಾಕು ಬೆಳೆಗಾರರು ಅತಿಯಾದ ಶೀತ ವಾತಾವರಣದಲ್ಲಿ ಸಸಿ ಬೆಳೆಯಲು ಮುಂದಾಗಬಾರದು, ಈ ವಾತಾವರಣದಲ್ಲಿ ಮೊಳಕೆ ಒಡೆದು ಬರುವ ಸಸಿಗಳು ಗುಣಮಟ್ಟ ಇರುವುದಿಲ್ಲ. ಬೇಸಿಗೆಯಲ್ಲಿ ಬದುಕುಳಿಯುವ ಸಾಮರ್ಥ್ಯ ಇಲ್ಲದೆ ಸಾವು ಅಥವಾ ಕೊಳೆ ರೋಗಕ್ಕೆ ಒಳಗಾಗಿ ರೈತರಿಗೆ ಹೆಚ್ಚಿನ ನಷ್ಟ ಉಂಟಾಗಲಿದೆ ಎಂದರು.

ಕಳೆದ ಸಾಲಿನಲ್ಲಿ ಪ್ರಾಕೃತಿಕ ವಿಕೋಪದಲ್ಲೂ 70 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತಂಬಾಕು ಬೆಳೆದು 85 ಮಿಲಿಯನ್‌ ಕೆಜಿ ಉತ್ಪತ್ತಿ ಮಾಡಲಾಗಿದೆ. ಈ ಪೈಕಿ ಮಾರುಕಟ್ಟೆಯಲ್ಲಿ 35 ಮಿಲಿಯನ್‌ ಕೆಜಿ ಮಾರಾಟ ಮಾಡಿದ್ದಾರೆ ಎಂದರು.

ತಂಬಾಕು ಬೆಳೆಗಾರರು ಹೆಚ್ಚಿನ ಮಾಹಿತಿಗೆ ಹುಣಸೂರು ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಬೇಕಾಗಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.