ADVERTISEMENT

ಮೈಸೂರು ದಸರಾ ಮಹೋತ್ಸವ: ಬಾನಂಗಳದಲ್ಲಿ ಡ್ರೋನ್ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:34 IST
Last Updated 29 ಸೆಪ್ಟೆಂಬರ್ 2025, 4:34 IST
ಭಾನುವಾರ ರಾತ್ರಿ ನಡೆದ ಡ್ರೋನ್ ಪ್ರದರ್ಶನದಲ್ಲಿ ಮೂಡಿಬಂದ ಹುಲಿಯ ಕಲಾಕೃತಿ –ಪ್ರಜಾವಾಣಿ ಚಿತ್ರ/ಅನೂಪ್ ರಾಘ .ಟಿ.
ಭಾನುವಾರ ರಾತ್ರಿ ನಡೆದ ಡ್ರೋನ್ ಪ್ರದರ್ಶನದಲ್ಲಿ ಮೂಡಿಬಂದ ಹುಲಿಯ ಕಲಾಕೃತಿ –ಪ್ರಜಾವಾಣಿ ಚಿತ್ರ/ಅನೂಪ್ ರಾಘ .ಟಿ.   

ಮೈಸೂರು: ಬಾನಂಗಳದಲ್ಲಿ ಏಕಕಾಲಕ್ಕೆ 3 ಸಾವಿರ ಡ್ರೋನ್‌ಗಳು ಬಿಡಿಸಿದ ಚಿತ್ತಾರವು ನೆರೆದ ಸಾವಿರಾರು ಪ್ರೇಕ್ಷಕರನ್ನು ಹೊಸತೊಂದು ಲೋಕಕ್ಕೆ ಕೊಂಡೊಯ್ಯಿತು. ಅದರಲ್ಲಿಯೂ ಹುಲಿಯ ಕಲಾಕೃತಿ ರೋಮಾಂಚನಗೊಳಿಸಿತು.

ದಸರಾ ಮಹೋತ್ಸವ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಭಾನುವಾರ ಸಂಜೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಡ್ರೋ‌ನ್ ಪ್ರದರ್ಶನವು ದಸರಾಕ್ಕೆ ಇನ್ನಷ್ಟು ರಂಗು ತುಂಬಿತು. 2983 ಡ್ರೋನ್ ಗಳನ್ನು ಬಳಸಿ ಹುಲಿಯ ಕಲಾಕೃತಿ ರಚಿಸಿ ಪ್ರದರ್ಶನವು ದಾಖಲೆ ಬರೆಯಿತು.

ಕಳೆದ ವರ್ಷದಿಂದ ದಸರೆಯಲ್ಲಿ ಡ್ರೋನ್‌ ಪ್ರದರ್ಶನ ಆಯೋಜಿಸಿದ್ದು, ಮೊದಲ ವರ್ಷದಂದು 1500 ಡ್ರೋನ್‌ಗಳನ್ನು ಬಳಸಲಾಗಿತ್ತು. ಈ ವರ್ಷದ ಮೊದಲ ಪ್ರದರ್ಶನದಲ್ಲಿಯೇ ದುಪ್ಪಟ್ಟು ಸಂಖ್ಯೆಯ ಡ್ರೋನ್‌ಗಳು ಆಗಸಕ್ಕೆ ಲಗ್ಗೆ ಇಟ್ಟವು. ಬಣ್ಣಬಣ್ಣದ ದೀಪಗಳಿಂದ ಮಿನುಗುತ್ತಾ ಆಕರ್ಷಕ ಕಲಾಕೃತಿಗಳನ್ನು ಸೃಷ್ಟಿಸಿದವು.

ADVERTISEMENT

ಸೌರಮಂಡಲ, ವಿಶ್ವಭೂಪಟ, ಸೈನಿಕ, ನವಿಲು, ಡಾಲ್ಫಿನ್, ರಣಹದ್ದು, ಸರ್ಪದ ಮೇಲೆ ಶ್ರೀಕೃಷ್ಣನ ನೃತ್ಯ, ಕಾವೇರಿ ಮಾತೆ, ಕರ್ನಾಟಕ ಭೂಪಟದ ರಚನೆಯ ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಬಿಂಬಿಸುವ ಪ್ರಯತ್ನವೂ ನಡೆಯಿತು. ಅಂಬಾರಿ ಆನೆ, ನಾಡದೇವತೆ ಚಾಮುಂಡೇಶ್ವರಿ ಕಲಾಕೃತಿಗಳು ನೋಡುಗರಿಗೆ ಅದ್ಭುತ ಮನರಂಜನೆ ನೀಡಿದವು.

ಕುನಾಲ್ ಹಾಡಿನ ಮೋಡಿ:

ಡ್ರೋನ್ ಪ್ರದರ್ಶನ ಆರಂಭಕ್ಕೂ ಖ್ಯಾತ ಹಿನ್ನಲೆ ಗಾಯಕ ಕುನಾಲ್ ಗಾಂಜಾವಾಲ ಮತ್ತು ತಂಡದವರ ಸಂಗೀತ ಕಾರ್ಯಕ್ರಮ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸಿತು.

ಪುನೀತ್ ರಾಜ್‍ಕುಮಾರ್ ಅಭಿನಯದ ‘ನೀನೆ ನೀನೆ’ ಹಾಡಿನೊಂದಿಗೆ ವೇದಿಕೆ ಪ್ರವೇಶಿಸಿದ ಕುನಾಲ್‌, ‘ಖುಷಿಯಾಗಿದೆ ಏಕೋ ನಿನ್ನಿಂದಲೆ’, ‘ಒಂದೇ ಒಂದು ಸಾರಿ ಕಣ್ಮುಂದೆ ಬಾರೆ...", ‘ನಿನ್ನ ಕಂಡ ಕ್ಷಣದಿಂದ..’, ‘ಹುಡುಗಿ ಹುಡುಗಿ ನಿನ್ನ ಕಂಡಾಗ‘, ‘ಕಿವಿ ಮಾತೊಂದು ಹೇಳಲೆ ನಾನಿಂದು’ ಸೇರಿದಂತೆ ಕನ್ನಡದ ಸಾಲುಸಾಲು ಗೀತೆಗಳ ಮೂಲಕ ಪ್ರೇಕ್ಷಕರ ಮನ ಗೆದ್ದರು.

ಭಾನುವಾರ ರಾತ್ರಿ ನಡೆದ ಡ್ರೋನ್ ಪ್ರದರ್ಶನದಲ್ಲಿ ಬಾನಂಗಳದಲ್ಲಿ ಮೂಡಿಬಂದ ಚಾಮುಂಡೇಶ್ವರಿ ಕಲಾಕೃತಿ –ಪ್ರಜಾವಾಣಿ ಚಿತ್ರ/ಅನೂಪ್ ರಾಘ .ಟಿ.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಡ್ರೋನ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್‌ ಸದಸ್ಯ ಕೆ. ಶಿವಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು, ದಸರಾ ದೀಪಾಲಂಕಾರ ಉಪ ಸಮಿತಿ (ಅಧಿಕಾರೇತರ) ಅಧ್ಯಕ್ಷ ರಾಘವೇಂದ್ರ ಇದ್ದರು.

ಸೋಮವಾರವೂ (ಸೆ. 29) ಡ್ರೋನ್‌ ಷೋ ಪ್ರದರ್ಶನವಿದೆ.

ಬನ್ನಿಮಂಟಪ ಮೈದಾನದಲ್ಲಿ ಭಾನುವಾರ ರಾತ್ರಿ ಕುನಾಲ್ ಗಾಂಜಾವಾಲ ಗಾಯನದ ಮೂಲಕ ರಂಜಿಸಿದರು – ಪ್ರಜಾವಾಣಿ ಚಿತ್ರ.

ಸಮಯದ ಗೊಂದಲ: ಪ್ರೇಕ್ಷಕ ಕಂಗಾಲು

ಡ್ರೋನ್‌ ಶೋ ಆರಂಭದ ಸಮಯದ ಕುರಿತು ಗೊಂದಲ ಉಂಟಾಗಿದ್ದು ಪ್ರೇಕ್ಷಕರು ಕಾದು ಬಸವಳಿದು ಸುಸ್ತಾದರು. ತಾಂತ್ರಿಕ ಸಮಸ್ಯೆ ಆಗಿರಬಹುದು ಎಂಬ ಆತಂಕವೂ ಕಾಡಿತು.  ನಿಗದಿತ ವೇಳಾಪಟ್ಟಿಯಂತೆ ರಾತ್ರಿ 7ಕ್ಕೆ ಡ್ರೋನ್ ಶೋ ನಡೆಯಬೇಕಿತ್ತು. ಆದರೆ ಕುನಾಲ್‌ ಸಂಗೀತ ಕಾರ್ಯಕ್ರಮದ ಬಗ್ಗೆ ಬಹುತೇಕರಿಗೆ ಮಾಹಿತಿ ಇರಲಿಲ್ಲ. ಮಧ್ಯಾಹ್ನ 4ರಿಂದಲೇ ಬನ್ನಿಮಂಟಪದತ್ತ ಪ್ರೇಕ್ಷಕರು ಬಂದಿದ್ದರು. ಸಂಜೆ ಆರಕ್ಕೆಲ್ಲ ಮೈದಾನ ಭರ್ತಿಯಾಗಿತ್ತು. ಆದರೆ ಸಂಗೀತ ಕಾರ್ಯಕ್ರಮ ಮುಗಿದು ಡ್ರೋನ್‌ ಷೋ ಆರಂಭ ಆದಾಗ ರಾತ್ರಿ 9 ಆಗಿತ್ತು. ಪ್ರದರ್ಶನ ಮುಗಿದ ಬಳಿಕ ಏಕಕಾಲಕ್ಕೆ ಪ್ರೇಕ್ಷಕರು ಮೈದಾನದಿಂದ ಹೊರಗೆ ಬಂದಿದ್ದು ಸಂಚಾರ ದಟ್ಟಣೆ ಉಂಟಾಯಿತು. ಇದರಿಂದಾಗಿ ವಾಹನಗಳು ಸಾಲುಗಟ್ಟಿ ನಿಂತವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.