ಮೈಸೂರು: ಇಲ್ಲಿನ ಮಹಾನಗರ ಪಾಲಿಕೆ ವಾರ್ಡ್ 18ರ (ಯಾದವಗಿರಿ) ಉಪಚುನಾವಣೆಯಲ್ಲಿ ಭಾನುವಾರ ಶೇ 45ರಷ್ಟು ಮತದಾನ ಆಗಿದೆ.
ವಾರ್ಡ್ ವ್ಯಾಪ್ತಿಗೆ ಸೇರಿದ ಒಟ್ಟು 11 ಮತಗಟ್ಟೆಗಳ ಪೈಕಿ ಮತಗಟ್ಟೆ ಸಂಖ್ಯೆ 182ರಲ್ಲಿ ಅತ್ಯಂತ ಕಡಿಮೆ ಶೇ 24.11ರಷ್ಟು ಮತದಾನವಾಗಿದ್ದರೆ, ಮತಗಟ್ಟೆ ಸಂಖ್ಯೆ 181ರಲ್ಲಿ ಅತ್ಯಂತ ಗರಿಷ್ಠ ಶೇ 62.80ರಷ್ಟು ಮತದಾನವಾಗಿದೆ.
ವಾರ್ಡ್ 18 ಯಾದವಗಿರಿ, ಮಂಜುನಾಥಪುರ ಮತ್ತು ಮೇದಾರ ಬ್ಲಾಕ್ ಪ್ರದೇಶಗಳನ್ನು ಒಳಗೊಂಡಿದೆ. ಬಿಜೆಪಿಯ ಬಿ.ವಿ.ರವೀಂದ್ರ, ಕಾಂಗ್ರೆಸ್ನ ರವೀಂದ್ರ ಕುಮಾರ್ ಮತ್ತು ಜೆಡಿಎಸ್ನ ಸ್ವಾಮಿ ಅವರು ಕಣದಲ್ಲಿದ್ದಾರೆ.
ಕೆಲವು ಮತಗಟ್ಟೆಗಳಲ್ಲಿ ಕಿರುಬೆರಳಿಗೆ ಮತ್ತೆ ಕೆಲವು ಮತಗಟ್ಟೆಗಳಲ್ಲಿ ಉಂಗುರದ ಬೆರಳಿಗೆ ಶಾಯಿ ಹಾಕಲಾಗಿದೆ. ಕೆಲವೆಡೆ ಬೆರಳಿಗೆ ಹಾಕಿದ ಶಾಯಿಯನ್ನು ಸುಲಭವಾಗಿ ಅಳಿಸಬಹುದಿತ್ತು ಎಂದು ಹಿರಿಯ ನಾಗರಿಕ ಸತ್ಯನಾರಾಯಣರಾವ್ ತಿಳಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ ಶಿವೇಗೌಡ, ‘ಇದು ಸತ್ಯಕ್ಕೆ ದೂರವಾದ ಆರೋಪ. ಎಲ್ಲೋ ಒಂದು ಕಡೆ ಮಾತ್ರ ಈ ಸಮಸ್ಯೆ ಕಂಡು ಬಂದಿರಬಹುದು. ಎಣ್ಣೆ ಹಚ್ಚಿಕೊಂಡ ಬೆರಳಿಗೆ ಹಾಕಿದಾಗ, ಹಚ್ಚಿದ ತಕ್ಷಣವೇ ಒರೆಸಿಕೊಂಡಾಗ ಅಳಿಸಿರಬಹುದು. ಉಳಿದಂತೆ, ಎಲ್ಲೆಡೆ ಶಾಂತಿಯುತವಾಗಿ ಯಾವುದೇ ಅಡ್ಡಿ ಇಲ್ಲದೇ ಚುನಾವಣೆ ನಡೆದಿದೆ’ ಎಂದು ತಿಳಿಸಿದ್ದಾರೆ.
ಮತಯಂತ್ರಗಳನ್ನು ಸಂಸ್ಕೃತ ಪಾಠಶಾಲೆಯಲ್ಲಿ ಇರಿಸಲಾಗಿದ್ದು, ಫೆ. 11ರಂದು ಮತ ಎಣಿಕೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.