ಮೈಸೂರಿನಲ್ಲಿ ಸಿಪಿಐ ಜಿಲ್ಲಾ ಮಂಡಳಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಸಮ್ಮೇಳನವನ್ನು ರಾಜ್ಯ ಸಹ ಕಾರ್ಯದರ್ಶಿ ಅಜ್ಜದ್ ಉದ್ಘಾಟಿಸಿದರು. ರಾಮಕೃಷ್ಣ, ಎನ್.ಕೆ. ದೇವದಾಸ್, ರಾಜು, ಸೋಮರಾಜ್ ಅರಸ್ ಪಾಲ್ಗೊಂಡಿದ್ದರು
–ಪ್ರಜಾವಾಣಿ ಚಿತ್ರ
ಮೈಸೂರು: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರ ಸಮಸ್ಯೆ ಬಗೆಹರಿಸದೇ, ಭಾವನಾತ್ಮಕ ರಾಜಕಾರಣದಲ್ಲಿ ನಿರತವಾಗಿದೆ’ ಎಂದು ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಅಜ್ಜದ್ ಹೇಳಿದರು.
ನಗರದ ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಸಿಪಿಐ ಜಿಲ್ಲಾ ಮಂಡಳಿಯು ಭಾನುವಾರ ಆಯೋಜಿಸಿದ್ದ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಭ್ರಷ್ಟಾಚಾರ ಕಿತ್ತೊಗೆಯುತ್ತೇವೆ, ವಿದೇಶದ ಕಪ್ಪು ಹಣ ವಾಪಾಸ್ ತರುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂಬ ಪ್ರಧಾನಿ ನರೇಂದ್ರ ಮೋದಿ ಭರವಸೆ ಹುಸಿಯಾಗಿದೆ’ ಎಂದರು.
‘2014ರಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ₹ 400 ಇತ್ತು. ಇದೀಗ ₹ 900ಕ್ಕೆ ಏರಿದೆ. ₹ 40 ಇದ್ದ ಲೀಟರ್ ಪೆಟ್ರೋಲ್ ₹ 100 ಗಡಿದಾಟಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರ ಬದುಕು ದುಸ್ತರವಾಗಿದೆ’ ಎಂದು ದೂರಿದರು.
‘ಅಧಿಕಾರಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ. ಸಂವಿಧಾನದಲ್ಲಿರುವ ಬಹುತ್ವದ ಅಂಶವನ್ನು ಬಿಜೆಪಿ ಸರ್ಕಾರ ಧಿಕ್ಕರಿಸಿದೆ. ಬಂಡವಾಳಶಾಹಿಗಳ ಹಿತಾಸಕ್ತಿ ಮುಖ್ಯವಾಗಿದೆ. ಅವರಿಗಾಗಿ ಮಾತ್ರವೇ ಆರ್ಥಿಕ ನೀತಿ ರೂಪಿಸಿದೆ. ಶ್ರೀಮಂತ– ಬಡವರ ಅಂತರ ಹೆಚ್ಚಿಸಿದೆ. ಶ್ರೀಮಂತರು ಶೇ 70ರಷ್ಟು ಸಂಪತ್ತು ಹೊಂದಿದ್ದಾರೆ’ ಎಂದು ಹೇಳಿದರು.
‘ಕಮ್ಯುನಿಸ್ಟ್ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದೆ. ಜಾತಿ, ಧರ್ಮ ಆಧಾರಿತ ರಾಜಕಾರಣವು ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟಿದೆ. ಚುನಾವಣಾ ರಾಜಕಾರಣದಲ್ಲಿ ನಾವು ಹಿನ್ನಡೆ ಸಾಧಿಸಿದ್ದೇವೆ ಎಂಬುದು ನಿಜ. ಆದರೆ, ಜನಪರ ಹೋರಾಟದಲ್ಲಿ ಇಂದಿಗೂ ಸಕ್ರಿಯ’ ಎಂದರು.
ಪದಾಧಿಕಾರಿಗಳಾದ ರಾಮಕೃಷ್ಣ, ಎನ್.ಕೆ. ದೇವದಾಸ್, ರಾಜು, ಸೋಮರಾಜ್ ಅರಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.