ಮೈಸೂರು: ನಗರದ ರಸ್ತೆಗಳಲ್ಲಿ ಪೊಲೀಸರೊಂದಿಗೆ ಉತ್ಸಾಹದಿಂದ ಓಡಿದ 9 ಸಾವಿರಕ್ಕೂ ಹೆಚ್ಚು ಮಂದಿ ನಾಗರಿಕರು ಭಾನುವಾರದ ಮುಂಜಾನೆಯ ಸೊಬಗನ್ನು ಹೆಚ್ಚಿಸಿದರು.
ಅರಮನೆ ಎದುರು ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಘೋಷಣೆಯಡಿ ಪೊಲೀಸ್ ಇಲಾಖೆಯು ಆಯೋಜಿಸಿದ್ದ ‘ಕರ್ನಾಟಕ ರಾಜ್ಯ ಪೊಲೀಸ್ ಓಟ–2025’ವು ಪೊಲೀಸರು, ವೃತ್ತಿಪರ ಹಾಗೂ ಹವ್ಯಾಸಿ ಓಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸಲು ವೇದಿಕೆಯೊದಗಿಸಿತು.
ಮಾದಕ ವಸ್ತುಗಳ ದುಷ್ಪರಿಣಾಮ, ಸಂಚಾರ ನಿಯಮಗಳ ಜಾಗೃತಿ, ಮಹಿಳೆಯರ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಬಗ್ಗೆ ಓಟದ ಮೂಲಕ ಅರಿವು ಮೂಡಿಸಲಾಯಿತು. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತೂ ಜಾಗೃತಿ ಮೂಡಿಸಲಾಯಿತು. ಪೊಲೀಸರು ಹಾಗೂ ನಾಗರಿಕರೊಂದಿಗೆ ನಗರಕ್ಕೆ ಬಂದಿದ್ದ ವಿದೇಶಿ ಪ್ರವಾಸಿಗರು ಹೆಜ್ಜೆ ಹಾಕಿದ್ದು ವಿಶೇಷ.
10 ಕಿ.ಮೀ ಓಟದ ನಾಗರಿಕರ ವಿಭಾಗದಲ್ಲಿ ಸುಮಿತ್ ಪಾಲ್ ಮೊದಲಿಗರಾಗಿ ಗುರಿ ಮುಟ್ಟಿದರೆ, ವೈ.ಎಸ್.ದೀಕ್ಷಿತ್ ಹಾಗೂ ಕೆ.ತನುಜ್ ಕುಮಾರ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಉಳಿದ 14 ಮಂದಿಗೂ ಪದಕ ವಿತರಣೆ ಮಾಡಲಾಯಿತು. ಫ್ರಾನ್ಸ್ನ ಮೂವರು ಪ್ರವಾಸಿಗರಲ್ಲಿ ಕೊಟ್ಟಿನ್ ಎಂಬುವರು ಪದಕ ಗಿಟ್ಟಿಸಿದರು.
ಪೊಲೀಸರ ವಿಭಾಗದಲ್ಲಿ ಅಮರುಲ್ಲಾ, ಪ್ರಭು ಜಮಖಂಡಿ, ಎನ್.ಗೋಪಾಲ್ ಅವರು ಮೊದಲ ಮೂವರಾಗಿ ಗುರಿ ಮುಟ್ಟಿದರು. ಉಳಿದ 13 ಮಂದಿಗೂ ಪದಕ ನೀಡಲಾಯಿತು.
5 ಕಿ.ಮೀ ಓಟದ ನಾಗರಿಕರ ವಿಭಾಗದಲ್ಲಿ ಸುಮಂತ್, ದೊರೆಸ್ವಾಮಿ ಹಾಗೂ ಮಹದೇವಸ್ವಾಮಿ ಮೊದಲ ಮೂವರಾಗಿ ಗುರಿ ಮುಟ್ಟಿದರು. ಉಳಿದ 6 ಮಂದಿ ಹಾಗೂ ಪೊಲೀಸರ ವಿಭಾಗದಲ್ಲಿ ಎಂ.ಎಸ್.ರಮೇಶ್, ಮಲ್ಲಪ್ಪ, ನಾಗೇಂದ್ರ ಅವರು ಪದಕ ಗೆದ್ದರು. ಉಳಿದ 5 ಮಂದಿಗೂ ಪದಕ ವಿತರಿಸಲಾಯಿತು.
ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ದಕ್ಷಿಣ ವಲಯ ಡಿಐಜಿ ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿಸಿಪಿಗಳಾದ ಎಂ.ಮುತ್ತುರಾಜ್, ಜಾಹ್ನವಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.