ADVERTISEMENT

ಮೈಸೂರು| ಗಾಂಧಿ ದೇಶಪ್ರೇಮ ಮೈಗೂಡಿಸಿಕೊಳ್ಳಿ: ಕವಿತಾ ರೈ ಕರೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 5:53 IST
Last Updated 26 ಜನವರಿ 2026, 5:53 IST
ಮೈಸೂರಿನ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರೊ.ಕವಿತಾ ರೈ ಉದ್ಘಾಟಿಸಿದರು
ಮೈಸೂರಿನ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರೊ.ಕವಿತಾ ರೈ ಉದ್ಘಾಟಿಸಿದರು   

ಮೈಸೂರು: ‘ಗಾಂಧೀಜಿಯವರ ಜೀವನಶೈಲಿ ಹಾಗೂ ಅವರಲ್ಲಿದ್ದ ದೇಶಪ್ರೇಮವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಕೆಎಸ್‌ಒಯು ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷೆ ಕವಿತಾ ರೈ ಹೇಳಿದರು.

ಇಲ್ಲಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಅದಮ್ಯ ರಂಗಶಾಲೆಯಿಂದ ಶನಿವಾರ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಎತ್ತರಕ್ಕೆ ಗಾಂಧೀಜಿ ಅವರನ್ನು ಕತ್ತರಿಸಿ ನೋಡುವ ಅಗತ್ಯವಿಲ್ಲ. ಅವರ ಎತ್ತರಕ್ಕೆ ತಲುಪಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಎಲ್ಲಾ ಕ್ಷೇತ್ರಗಳ ಕುರಿತು ಅವರು ಮಾತನಾಡಿದ್ದಾರೆ’ ಎಂದರು.

ADVERTISEMENT

‘ದೇಶ ವಿಭಜಿಸಿದರೆ, ದೇಹವನ್ನು ಎರಡು ಭಾಗ ಮಾಡಿದಂತೆ. ಅದನ್ನು ಮಾಡಬೇಡಿ ಎಂದು ಗಾಂಧೀಜಿ ಅಂದು ಹೇಳಿದ್ದರು. ಯೂಟ್ಯೂಬ್ ಯುಗದಲ್ಲಿ ಸತ್ಯ ತಿರುಚಲಾಗದು. ರಾಜಕಾರಣಿಗಳು ತಿರುಚಿ ಮಾತನಾಡಬಾರದು; ಜನರಿಗೆ ಸತ್ಯವನ್ನು ತಿಳಿಸಬೇಕು’ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ: ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಷಹಸೀನಾ ಬೇಗಂ, ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಉಪಾಧೀಕ್ಷಕ ಸಿ. ಕಿರಣ್ ಕುಮಾರ್, ಹುಣಸೂರಿನ ಶಾಸ್ತ್ರಿ ಸಂಯುಕ್ತ ಪಿಯು ಕಾಲೇಜು ಪ್ರಾಂಶುಪಾಲ ಎಂ.ಎಲ್. ರವಿಶಂಕರ್‌, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರಿಗೆ ‘ಗಾಂಧಿ ಸದ್ಭಾವನಾ ಪ್ರಶಸ್ತಿ’ಯನ್ನು ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್ ಪ್ರದಾನ ಮಾಡಿದರು.

ಸ್ವಾಮಿ ವಿವೇಕಾನಂದ ಸಮಾಜಸೇವಾ ಪ್ರಶಸ್ತಿಯನ್ನು ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್‌ ಯೋಜನಾಧಿಕಾರಿ ಎನ್. ಸಂತೋಷ್ ಕುಮಾರ್, ಸಾಹಿತಿ ನೀ.ಗೂ. ರಮೇಶ್, ಪತ್ರಕರ್ತ ಅವಿನಾಶ್ ಜೈನಹಳ್ಳಿ, ತಿಪಟೂರಿನ ಎಸ್. ಗಂಗಾಧರ ಕದ್ರಿ, ಪುಸ್ತಕ ಸಂಗ್ರಾಹಕ ಎಚ್.ಬಿ. ಬೆಟ್ಟಸ್ವಾಮಿ, ನಂಜನಗೂಡಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಸ್.ಎನ್. ಚಂದ್ರ ಶೇಖರ ಬಾಬು, ತಿಪಟೂರಿನ ಟೈಮ್ಸ್ ಪಿಯು ಕಾಲೇಜಿನ ಆಡಳಿತಾಧಿಕಾರಿ ಕೆ.ಎಲ್. ಅನೂಪ್, ಎಚ್.ಡಿ. ಕೋಟೆಯ ಸೇಂಟ್ ಮೇರಿಸ್ ಪಿಯು ಕಾಲೇಜಿನ ಪ್ರಾಂಶುಪಾಲ ಸಂತೋಷ್ ಕುಮಾರ್, ಕೆ.ಆ‌ರ್. ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಎಂ. ಕೃಷ್ಣ ಬನ್ನಹಳ್ಳಿ, ಮಳವಳ್ಳಿಯ ಶಾಂತಿ ಪಿಯು ಕಾಲೇಜಿನ ಉಪನ್ಯಾಸಕಿ ಸಿ. ಅನಿತಾ ಅವರಿಗೆ ಪ್ರದಾನ ಮಾಡಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಅದಮ್ಯ ಚಿಗುರು ಪ್ರತಿಭಾ ಚೇತನ’ ಪ್ರಶಸ್ತಿಯನ್ನು ಎಡಿಸಿ ಪಿ. ಶಿವರಾಜು ಹಾಗೂ ಚಾಮರಾಜನಗರ ಜಿಲ್ಲೆ ಲೋಕಾಯುಕ್ತ ಉಪಾಧೀಕ್ಷಕ ಜಿ.ಎಸ್. ಗಜೇಂದ್ರಪ್ರಸಾದ್ ಪ್ರದಾನ ಮಾಡಿದರು.

ಕರ್ನಾಟಕ ಮಾಹಿತಿ ಆಯೋಗದ ಮಾಜಿ ಆಯುಕ್ತ ಕೆ.ಎಂ. ಚಂದ್ರೇಗೌಡ, ಅದಮ್ಯ ರಂಗಶಾಲೆ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಲೇಖಕ ಮಿರ್ಲೆ ಚಂದ್ರಶೇಖರ, ಉದ್ಯಮಿ ಎನ್.ಎಲ್. ಗಿರೀಶ್  ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.