ಎಚ್.ಡಿ.ಕೋಟೆ: ಕೇರಳ ರಾಜ್ಯದ ಕೆಲ ಗ್ರಾಮಗಳ ತ್ಯಾಜ್ಯ ಕಬಿನಿ ನದಿ ಮೂಲಕ ಹರಿದುಬರುತ್ತಿದ್ದು,ರಾಜ್ಯದ ನಾಗರಹೊಳೆಹಾಗೂ ಬಂಡೀಪುರ ಅಭಯಾರಣ್ಯದ ಜೀವಿಗಳಿಗೆ ಮಾರಕವಾಗುತ್ತಿದೆ.
ಈ ತ್ಯಾಜ್ಯವು ಕಬಿನಿ ಜಲಾಶಯದ ಹಿನ್ನೀರು ಸೇರುತ್ತಿದ್ದು, ಸುತ್ತಮುತ್ತ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಅದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ಅಧಿಕ ಪ್ರಮಾಣದಲ್ಲಿದೆ.ವೈದ್ಯಕೀಯ ತ್ಯಾಜ್ಯ, ಮದ್ಯದ ಬಾಟಲಿ, ಥರ್ಮೊಕೋಲ್ ಕೂಡ ಬಂದು ಸೇರುತ್ತಿವೆ.
‘ಕೇರಳವಯನಾಡು ಜಿಲ್ಲೆಯಲ್ಲಿ ಕಬಿನಿ ನದಿ ಹುಟ್ಟುತ್ತದೆ. ಅಲ್ಲಿನ ಗ್ರಾಮದ ಜನರು ತ್ಯಾಜ್ಯವನ್ನುನದಿಗೆ ಎಸೆಯುತ್ತಾರೆ. ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ತ್ಯಾಜ್ಯವು ನದಿಗೆ ಸೇರುತ್ತಿದೆ. ಮುಂಗಾರು ಪ್ರಾರಂಭವಾದ ಕೂಡಲೇ ಕಬಿನಿ ನದಿಯಲ್ಲಿ ಹರಿದು ಬರುವ ಈ ತ್ಯಾಜ್ಯ ಜಲಾಶಯದ ಹಿನ್ನೀರನ್ನು ಸೇರುತ್ತದೆ. ಇದರಿಂದ ಕಾಡು ಪ್ರಾಣಿಗಳಿಗೆ ಮತ್ತು ಜಲಚರಗಳಿಗೆ ಸಮಸ್ಯೆಯಾಗುತ್ತಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮಹಾದೇವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಕಬಿನಿ ಜಲಾಶಯದ ಹಿನ್ನೀರಿ ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಹೊರ ಹಾಕುವ ಕಾರ್ಯವನ್ನು ಅರಣ್ಯ ಇಲಾಖೆ ಆರಂಭಿಸಿದೆ.
ಅರಣ್ಯ ಇಲಾಖೆಯ ಅಂತ ರಸಂತೆ ಮತ್ತು ಮೇಟಿಕುಪ್ಪೆ ವನ್ಯಜೀವಿ ವಲಯದ ಅಧಿಕಾರಿಗಳು, ಸಿಬ್ಬಂದಿ ಕಬಿನಿ ಹಿನ್ನೀರಿನ ಬಳಿ ಇರುವ ಜಂಗಲ್ ಲಾಡ್ಜಸ್ ಅಂಡ್ರೆಸಾರ್ಟ್ಸ್, ವಾಟರ್ ವುಡ್, ಸೆರಾಯ್,ಕಾವಾ ರೆಸಾರ್ಟ್ ಸಿಬ್ಬಂದಿ ಹಾಗೂ ಸ್ವಯಂಸೇವಕರು ತ್ಯಾಜ್ಯ ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದಾರೆ. ಅರಣ್ಯಾಧಿಕಾರಿಗಳಾದ ಸಿದ್ದರಾಜು, ಮಧು ನೆರವಾಗುತ್ತಿದ್ದಾರೆ.
ಅರಣ್ಯ ಇಲಾಖೆಯ ಎರಡು ಬೋಟ್, ಜಂಗಲ್ ಲಾಡ್ಜಸ್ನ ಎರಡು ವಾಹನಹಾಗೂ ಒಂದು ಬೋಟ್ಅನ್ನುಈ ಕಾರ್ಯ ಕ್ಕೆಬಳಕೆ ಮಾಡಲಾಗುತ್ತಿದೆ. ಸುಮಾರು 200 ಚೀಲಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಮದ್ಯದ ಬಾಟಲಿಗಳು, ಚಪ್ಪಲಿಗಳು, ಷೂಗಳು ಸೇರಿದಂತೆ ತ್ಯಾಜ್ಯವನ್ನು ಹಿನ್ನೀರಿನಿಂದ ಹೊರ ತರಲಾಗುತ್ತಿದೆ.
ಫೆಬ್ರುವರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ಮೊದಲ ಅಭಿಯಾನ ನಡೆದಿತ್ತು.ಆಗ ಅರಣ್ಯ ಇಲಾಖೆ ನೌಕರರು, ರೆಸಾರ್ಟ್ ಸಿಬ್ಬಂದಿ, ಪೊನ್ನಂಪೇಟೆ ಅರಣ್ಯ ತರಬೇತಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಮಾರು ಎರಡೂವರೆ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿತ್ತು. ಅದನ್ನು ‘ನಮ್ಮ ಮೈಸೂರು ಫೌಂಡೇಷನ್ ಟ್ರಸ್ಟ್’ ಎಂಬ ಸೇವಾ ಸಂಸ್ಥೆ ಖರೀದಿಸಿ ಮರುಬಳಕೆ ಮಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.