
ಮೈಸೂರು: ನಗರದ ‘ಮೈಸೂರು ರೇಸ್ ಕ್ಲಬ್’ನಲ್ಲಿದ್ದ ಕುದುರೆಯೊಂದು ‘ಗ್ಲ್ಯಾಂಡರ್ಸ್’ ರೋಗದ ಸೋಂಕಿನಿಂದ ಮೃತಪಟ್ಟಿರುವ ಕಾರಣ, ಕೆಲವೇ ಮೀಟರ್ ಸಮೀಪದಲ್ಲಿರುವ ಚಾಮರಾಜೇಂದ್ರ ಮೃಗಾಲಯದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
ಸೋಂಕು ಹರಡುವ ಭೀತಿ ಕಾರಣ, ರೇಸ್ಕೋರ್ಸ್ ಸುತ್ತಲಿನ ಎರಡು ಕಿ.ಮೀ ಆವರಣವನ್ನು ಅಧಿಸೂಚಿತ ಪ್ರದೇಶವೆಂದು ಸರ್ಕಾರ ಪರಿಗಣಿಸಿದ್ದು, ಕುದುರೆ, ಕತ್ತೆ, ಹೇಸರಗತ್ತೆ ಓಡಾಟ ನಿಷೇಧಿಸಿದೆ.
ಮೃಗಾಲಯದಲ್ಲಿ 6 ಜೀಬ್ರಾ ಹಾಗೂ 6 ಜಿರಾಫೆಗಳಿದ್ದು, ಅವುಗಳಿಗೆ ಸೋಂಕು ತಗುಲುವ ಸಂಭವ ಇರುವುದರಿಂದ ನಿಗಾ ವಹಿಸಲಾಗಿದೆ. ಆವರಣದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಕಾರ್ಯ ನಿತ್ಯ 3ರಿಂದ 4 ಬಾರಿ ನಡೆಯುತ್ತಿದೆ. ಕಾಂಪೌಂಡ್ ಹಾಗೂ ಪ್ರವೇಶದ್ವಾರಗಳ ಬಳಿಯೂ ಸಿಂಪಡಿಸಲಾಗುತ್ತಿದೆ.
‘ಆಹಾರ ಪೂರೈಸಲು ಪ್ರತ್ಯೇಕ ವಾಹನ ಬಳಸುವಂತೆ ಸೂಚಿಸಲಾಗಿದೆ. ರೇಸ್ಕೋರ್ಸ್ನಿಂದ ಯಾವುದೇ ವಾಹನ ಒಳಬಾರದಂತೆ ಕ್ರಮ ವಹಿಸಲಾಗಿದೆ. ಪ್ರತಿ ವಾಹನವನ್ನೂ ಸ್ಯಾನಿಟೈಸ್ ಮಾಡಲಾಗುತ್ತಿದೆ. ಈಗಾಗಲೇ ವನ್ಯಜೀವಿ ತಜ್ಞರ ಉನ್ನತ ಮಟ್ಟದ ಸಭೆ ನಡೆಸಿದ್ದು, ಎಸ್ಒಪಿ ಅನ್ವಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.