
ಮೈಸೂರು: ಇಮ್ಮಾವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಚ್ಚಬಾರದು ಎಂದು ಆಗ್ರಹಿಸಿ ಎಐಡಿಎಸ್ಒ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ ಮಾತನಾಡಿ, ‘ಇಮ್ಮಾವು ಸರ್ಕಾರಿ ಶಾಲೆಯನ್ನು ಹೊರಳವಾಡಿ ಶಾಲೆಗೆ ವಿಲೀನಗೊಳಿಸಲಾಗುತ್ತಿದೆ. ಊರಿನಲ್ಲೇ ಶಾಲೆ ಇದ್ದರೆ ಬಡ ಮಕ್ಕಳು ಜ್ಞಾನಾರ್ಜನೆ ಮಾಡಿ ವ್ಯವಸ್ಥೆಯನ್ನು ಪ್ರಶ್ನಿಸುವ ಶಕ್ತಿ ಪಡೆಯುತ್ತಾರೆ ಎಂಬ ಭಯದಿಂದ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷ ಬಸವರಾಜು ಮಾತನಾಡಿ, ‘ವಿಲೀನ ಪಟ್ಟಿಯಲ್ಲಿ ಇರುವ ಬಹುತೇಕ ಶಾಲೆಗಳು ಗ್ರಾಮೀಣ ಮತ್ತು ಗಡಿ ಪ್ರದೇಶಗಳಲ್ಲೇ ಇವೆ. ಇಲ್ಲಿ ಬಡ, ಕೂಲಿ ಕಾರ್ಮಿಕ ಹಾಗೂ ರೈತರ ಮಕ್ಕಳು ಶಿಕ್ಷಣ ಪಡೆಯುತ್ತಾರೆ. ಶಾಲೆ ದೂರವಿದ್ದರೆ ಅವರು ಶಿಕ್ಷಣ ಮೊಟಕುಗೊಳಿಸುವ ಆತಂಕವಿದೆ’ ಎಂದರು.
ಗ್ರಾಮಸ್ಥರಾದ ಪ್ರೇಮ್ ಮಾತನಾಡಿ, ‘1949ರಲ್ಲಿ ಸ್ಥಾಪನೆಯಾಗಿರುವ ನಮ್ಮೂರ ಶಾಲೆ, 60ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡು ಅತ್ಯುತ್ತಮವಾಗಿ ನಡೆಯುತ್ತಿದೆ. ನಮ್ಮೂರ ಶಾಲೆ ನಮ್ಮ ಸಂಸ್ಕೃತಿ ಮತ್ತು ಬದುಕಿನ ಭಾಗವೇ ಆಗಿವೆ. ಅಂಥ ಶಾಲೆಗಳು ವಿಲೀನವಾಗಿ, ತೆರೆಮರೆಗೆ ಸರಿಯುತ್ತಿರುವುದು ವಿಷಾದನೀಯ’ ಎಂದು ಹೇಳಿದರು.
ಸಂಘಟನೆಯ ಪದಾಧಿಕಾರಿಗಳಾದ ಚಂದ್ರಿಕಾ, ಅಂಜಲಿ, ಅಭಿಷೇಕ್, ದಿಶಾ, ನಂದೀಶ್ ಹಾಗೂ ಗ್ರಾಮಸ್ಥರಾದ ಗಿರಿರಾಜು, ಬಾಲು, ಪವಿತ್ರಾ, ವೆಂಕಟೇಶ್,
ಪುಟ್ಟಮ್ಮ, ಬಸಪ್ಪ, ಯಶವಂತ್, ಮನು, ರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.