ಮೈಸೂರು: ‘ಎಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕುಗಳ ಕಾಡಂಚಿನಿಲ್ಲಿ ವಾಸವಾಗಿರುವ ಸಾರ್ವಜನಿಕರಿಗೆ ಉಂಟಾಗಿರುವ ತೊಂದರೆಗಳನ್ನು ಪರಿಹರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಸೂಚಿಸಿದರು.
ಇಲ್ಲಿನ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಅರಣ್ಯ ಭಾಗದಲ್ಲಿ ವಾಸವಾಗಿದ್ದ ಕೆಲವರಿಗೆ ಸರ್ಕಾರದಿಂದ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ. ಆದರೆ ಅವರ ಬಳಿ ಹಕ್ಕುಪತ್ರ ಇಲ್ಲ. ಅವರಿಗೆ ಹಕ್ಕುಪತ್ರಗಳನ್ನು ತ್ವರಿತವಾಗಿ ಒದಗಿಸಿಕೊಡಬೇಕು. ಹಲವು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಬೇಕು’ ಎಂದರು.
‘ಡಿ.ಬಿ.ಕುಪ್ಪೆಯಲ್ಲಿ 376 ಜನರಿಗೆ ಜಮೀನಿನ ಹಕ್ಕುಪತ್ರ ನೀಡಲು ದಾಖಲೆಗಳನ್ನು ಪರಿಶೀಲಿಸಲಾಗಿದೆ. ತಿರಸ್ಕೃತಗೊಂಡಿರುವ 90 ಹಕ್ಕುಪತ್ರಗಳನ್ನು ಮರು ಪರಿಶೀಲಿಸಿ ಅದರಲ್ಲಿ ಅರ್ಹರಿದ್ದಲ್ಲಿ ಹಕ್ಕುಪತ್ರ ಕೊಡಬೇಕು. ಈ ಹಿಂದೆ ನೀಡಲಾಗಿರುವ ಕೆಲವು ಹಕ್ಕುಪತ್ರಗಳಲ್ಲಿ ಅವರ ಮಕ್ಕಳ ಹೆಸರು ನಮೂದಿಸಿಲ್ಲ. ಇದರಿಂದ ಮಕ್ಕಳು ಹಕ್ಕು ಪಡೆಯಲು ಸಮಸ್ಯೆಯಾಗುತ್ತಿದ್ದು, ಈ ತೊಂದರೆಯನ್ನೂ ಕೂಡಲೇ ಸರಿಪಡಿಸಬೇಕು’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ‘ಎಚ್.ಡಿ.ಕೋಟೆ ತಾಲ್ಲೂಕು ಹರಿಹರಪುರ ಗ್ರಾಮದ ಸರ್ವೆ ನಂ.3ರಲ್ಲಿ 530 ಎಕರೆ ಭೂಮಿಯಲ್ಲಿ 370 ಎಕರೆ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ. ಉಳಿದಿರುವ 160 ಎಕರೆಯನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಬಾಕಿ 30 ಎಕರೆ ಭೂಮಿಯನ್ನು ಮಂಜೂರು ಮಾಡಲು ಕ್ರಮ ವಹಿಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.