ADVERTISEMENT

ಎಚ್.ಡಿ. ಕೋಟೆ : ಶಾಸಕ ರಾಜುಗೌಡ, ನಟ ಗಣೇಶ್ ಗಿಡ ನೆಟ್ಟು ವನಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 9:59 IST
Last Updated 10 ಸೆಪ್ಟೆಂಬರ್ 2021, 9:59 IST
   

ಎಚ್. ಡಿ. ಕೋಟೆ : ತಾಲ್ಲೂಕಿನ ವನ್ಯ ಸಂಪತ್ತು ಮತ್ತು ಜಲ ಸಂಪತ್ತಿನ ಮೂಲಕ ಅತ್ಯುತ್ತಮ ಪ್ರವಾಸಿ ತಾಣವಾಗಿ ಮಾಡುವ ಎಲ್ಲ ಅರ್ಹತೆಗಳನ್ನು ಎಚ್.ಡಿ. ಕೋಟೆ ಹೊಂದಿದೆ ಎಂದು ಸುರಪುರ ಕ್ಷೇತ್ರದ ಶಾಸಕ ರಾಜುಗೌಡ ಹೇಳಿದರು.

ತಾಲ್ಲೂಕಿನ ಕಾರಾಪುರ ಜಂಗಲ್ ರೆಸಾರ್ಟ್‌ನಲ್ಲಿ ರಾಜುಗೌಡ ಮತ್ತು ನಟ ಗೋಲ್ಡನ್ ಸ್ಟಾರ್ ಗಣೇಶ್ ಗಿಡ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರವಾಸಿಗರ ಅತ್ಯುತ್ತಮ ತಾಣವಾಗಿ ಎಚ್. ಡಿ.ಕೋಟೆ ಕ್ಷೇತ್ರ ನಿರ್ಮಾಣಗೊಳ್ಳುತ್ತಿದೆ, ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡು ತಾಲ್ಲೂಕಿನ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬಹುದು ಎಂದರು.

ಪ್ರತಿಯೊಬ್ಬ ವ್ಯಕ್ತಿಯೂ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ಸರ್ಕಾರಿ ಸಹಭಾಗಿತ್ವದ ಎಲ್ಲಾ ರೆಸಾರ್ಟ್ ಗಳಲ್ಲಿಯೂ ಸಾರ್ವಜನಿಕರು ಮತ್ತು ಸಾಮಾನ್ಯ ಕುಟುಂಬದವರು ಸಹ ಆನಂದ ಪಡುವ ರೀತಿಯಲ್ಲಿ ಹೊಸ ರೂಪವನ್ನು ಪಡೆಯುತ್ತಿದೆ ಎಂದರು.

ADVERTISEMENT

ಅರಣ್ಯ ಮತ್ತು ವಸತಿ ನಿಗಮದ ಅಧ್ಯಕ್ಷರಾಗಿ ಅಪ್ಪಣ್ಣ ಆಯ್ಕೆಯಾದ ಮೇಲೆ ರೆಸಾರ್ಟ್‌ಗಳು ಬಹಳಷ್ಟು ಹೊಸತನದಲ್ಲಿ ಅಭಿವೃದ್ಧಿಯಾಗುತ್ತಿದೆ, ಕೆಲ ಅಧಿಕಾರಿಗಳು ನಡೆಸುತ್ತಿದ್ದ ಕಳ್ಳಾಟಕ್ಕೆ ತಡೆ ನೀಡಿದ್ದಾರೆ. ಕೆಲವರು ಇವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ನಡೆಸುತ್ತಿದ್ದಾರೆ, ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಸಹ ವಿಚಾರ ತಿಳಿಸಲಾಗಿದೆ ಎಂದರು.

ಅರಣ್ಯ ಸಚಿವರಾಗಿರುವ ಆನಂದ್ ಸಿಂಗ್ ಈಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವಂತೆ ಅಧಿವೇಶನದಲ್ಲಿ ಮನವಿ ಮಾಡುತ್ತೇನೆ ಎಂದರು.

ಚಲನಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್ ಗಿಡಗಳನ್ನು ನೆಟ್ಟು ಪರಿಸರವಿದ್ದರೆ ನಾವು, ನಾವು ಪರಿಸರಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕು ಎಂದರು.

ಚಲನಚಿತ್ರಗಳ ಶೂಟಿಂಗ್ ಮಾಡಲು ಇಲ್ಲಿ ಅತ್ಯುತ್ತಮವಾಗಿದ್ದು, ಸರ್ಕಾರದ ಅನುನತಿ ಸಿಗುವುದು ತಡವಾಗುತ್ತದೆ. ಹಾಗಾಗಿ ಇಲ್ಲಿ ಚಲನಚಿತ್ರ ನಿರ್ಮಾಣ ಮಾಡಲು ಸ್ವಲ್ಪ ಕಷ್ಟಕರವಾಗುತ್ತದೆ ಎಂದರು.

ದೊಡ್ಡ ಪರದೆಯಲ್ಲಿ ಪರಿಸರದ ಬಗ್ಗೆ ನಾವು ತೋರಿಸುವುದರಿಂದ ಪ್ರವಾಸಿ ತಾಣ ಮತ್ತಷ್ಟು ಅಭಿವೃದ್ಧಿಯಾಗುತ್ತದೆ, ಜೋಗ ಜಲಪಾತವು ಸಹ ನಮ್ಮ ಮುಂಗಾರುಮಳೆ ಸಿನಿಮಾ ನಂತರ ಅತ್ಯುತ್ತಮ ಪ್ರವಾಸಿ ತಾಣವಾಗಿತ್ತು ಎಂದು ನೆನಪಿಸಿಕೊಂಡರು.

ಪ್ರವಾಸಿ ತಾಣಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸಿನಿಮಾವೊಂದು ಅತ್ಯುತ್ತಮ ಮಾಧ್ಯಮ ಎಂದರು.

ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯ ವಸತಿ ನಿಗಮಗಳ ಅಧ್ಯಕ್ಷ ಅಪ್ಪಣ್ಣ ಮಾತನಾಡಿ ಪ್ರವಾಸಿ ತಾಣಗಳಿಗೆ ವಿಶೇಷ ವ್ಯಕ್ತಿಗಳು ಮತ್ತು ಸ್ವಾಮೀಜಿಗಳು ಭೇಟಿ ನೀಡಿದ ನೆನಪಿಗಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಚಲನಚಿತ್ರ ನಟರಾದ ಸಿಲ್ಲಿಲಲ್ಲಿ ರವಿಶಂಕರ್, ಜಗದೀಶ್, ದಯಾನಂದ್, ಜಂಗಲ್ ಲಾಡ್ಜ್ ವ್ಯವಸ್ಥಾಪಕ ಅನಿಕೇತನ, ಸತ್ಯನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.