ಮೈಸೂರು: ‘ಹಿಂದೂ ಸಂಸ್ಕೃತಿ ವಿರುದ್ಧ ಅನೇಕ ಕಡೆಗಳಿಂದ ಷಡ್ಯಂತ್ರಗಳು ನಡೆಯುತ್ತಿವೆ. ನಾವು ಇನ್ನಷ್ಟು ಜಾಗೃತಗೊಳ್ಳಬೇಕಿದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಇಲ್ಲಿ ತಿಳಿಸಿದರು.
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಚಾತುರ್ಮಾಸ್ಯ ವ್ರತದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ನಮ್ಮ ಸಂಸ್ಕೃತಿಯ ದೋಷವನ್ನು ಹುಡುಕುವುದರಲ್ಲೇ ಹಲವರು ನಿರತರಾಗಿದ್ದಾರೆ. ಆದರೆ, ಶಾಶ್ವತ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ’ ಎಂದರು.
‘ಇಂಥವರ ವಿರುದ್ಧ ಇನ್ನಷ್ಟು ಜಾಗೃತವಾಗಿ ಹೋರಾಡಬೇಕಿದೆ. ನಮ್ಮ ರಾಷ್ಟ್ರ, ಸಮಾಜ, ಸಂಸ್ಕೃತಿ ಉಳಿಸಲು ಸಂಕಲ್ಪ ಮಾಡಬೇಕಿದೆ.ನಾನು ಹೀಗೆ ಹೇಳಿದರೆ ಕಾಗೇರಿ ಮೂಢನಂಬಿಕೆಗಳನ್ನು ಪ್ರಚಾರ ಮಾಡಿದರು ಎಂದು ನಾಳೆ ಸುದ್ದಿಯಾಗುತ್ತದೆ. ಆದರೆ, ನಮ್ಮ ನಂಬಿಕೆಗಳು ಮೂಢನಂಬಿಕೆಗಳಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು’ ಎಂದರು.
ಹೊಸತನಕ್ಕೆ ಅವಕಾಶ: ಕಾಗೇರಿ
ಸದನದಲ್ಲಿ ಹೊಸತನದಿಂದ ಕೂಡಿದ ಚಟುವಟಿಕೆ, ಚರ್ಚೆ, ಯೋಚನೆಗಳು ಪ್ರಕಟವಾಗಲು ಅವಕಾಶ ಕಲ್ಪಿಸುವುದಾಗಿ ಕಾಗೇರಿ ತಿಳಿಸಿದರು.
‘ಮಸೂದೆ ಹಾಗೂ ಇತರ ವಿಷಯಗಳ ಕುರಿತು ಚರ್ಚಿಸಲು ಸದಸ್ಯರಿಗೆ ಹೆಚ್ಚಿನ ಅವಕಾಶ ನೀಡುತ್ತೇನೆ. ಹೊಸ ಶಾಸಕರು, ಜನಪರವಾಗಿ ಯೋಚನೆ ಮಾಡುವವರು ಹೆಚ್ಚೆಚ್ಚು ಮಾತನಾಡಬೇಕು. ಸದನವನ್ನು ಒಗ್ಗಟ್ಟಿನಿಂದ ಮುನ್ನಡೆಸುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದು ಮೈಸೂರಿನಲ್ಲಿ ಶನಿವಾರ ಮಾಧ್ಯಮದವರಿಗೆ ಹೇಳಿದರು.
‘ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಹೀಗಾಗಿ, ಆ ವಿಷಯದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಸುಪ್ರೀಂ ಕೋರ್ಟ್ ನೀಡುವ ತೀರ್ಪಿನಂತೆ ನಡೆದುಕೊಳ್ಳಬೇಕಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.