ಹುಣಸೂರು: ‘ರಾಜ್ಯ ಸರ್ಕಾರದಿಂದ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗದ ಕಾರಣ ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿಲ್ಲ. ಯೋಜನೆಗಳು ವಿಳಂಬವಾಗಿ, ಜನರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ’ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ನಗರದ 26ನೇ ವಾರ್ಡ್ನಲ್ಲಿ ₹ 40 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯೋಜನೆಗೆ ಅಡ್ಡಗಾಲು: ಸರ್ಕಾರದದ ಯೋಜನೆ ತರಲು ಅಡ್ಡಗಾಲು ಹಾಕುವರಿದ್ದು, ಸಾರ್ವಜನಿಕ ವೇದಿಕೆಯಲ್ಲಿ ಯಾವ ಯೋಜನೆ, ಎಷ್ಟು ಅನುದಾನ ಕ್ಷೇತ್ರಕ್ಕೆ ತರುತ್ತಿದ್ದೇನೆ ಎಂದು ಹೇಳುವುದು ಕಷ್ಟವಾಗಿದೆ. ಅನುದಾನದೊಂದಿಗೆ ಕ್ಷೇತ್ರದ ಯೋಜನೆಗಳಿಗೆ ಭೂಮಿ ಪೂಜೆ ನಡೆಸಿ ಯಾವುದೇ ಅಡೆತಡೆಗಳಿಲ್ಲದೆ ಯೋಜನೆ ಅನುಷ್ಠಾನಗೊಳಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ’ ಎಂದು ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು.
ಆದಾಯ ಕೊರತೆ: ನಗರಸಭೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸಾರ್ವಜನಿಕರು ತೆರಿಗೆ ಪಾವತಿಸಿ ನಗರಸಭೆ ಆರ್ಥಿಕ ಸ್ಥಿತಿ ಸುಧಾರಿಸಲು ಕೈ ಜೋಡಿಸಬೇಕು. 2025-26 ರಲ್ಲಿ ನಗರಸಭೆಯಿಂದ ಬೇಡಿಕೆ ಇರುವುದು ₹7.20 ಕೋಟಿ. ಆದರೆ ಸಂಗ್ರಹವಾಗಿರುವು ₹6 ಕೋಟಿ, ₹ 1.20 ಕೋಟಿ ಕೊರತೆ ಅನುಭವಿಸಿದೆ. ಈ ಪರಿಸ್ಥಿತಿಯಲ್ಲಿ ಯಾವ ಅಭಿವೃದ್ಧಿ ಕಾಮಗಾರಿ ನಗರಸಭೆ ತೆಗೆದುಕೊಳ್ಳಲು ಸಾಧ್ಯ ?’ ಎಂದರು.
ಅಧ್ಯಕ್ಷರ ಅಳಲು: ನಗರಸಭೆ ಅಧ್ಯಕ್ಷ 26ನೇ ವಾರ್ಡ್ ಸದಸ್ಯ ಗಣೇಶ್ ಕುಮಾರಸ್ವಾಮಿ ಮಾತನಾಡಿ, ‘ ನಮ್ಮ ಅವಧಿಯಲ್ಲಿ ಕೆಲವು ತಿಂಗಳಿಗಳಲ್ಲಿ ಪೂರ್ಣಗೊಳ್ಳಲಿದೆ, 2 ವರ್ಷ ಕೋವಿಡ್, ಬಳಿಕ ಗ್ಯಾರಂಟಿ ಯೋಜನೆ ಜಾರಿಯಿಂದಾಗಿ ಅನುದಾನವಿಲ್ಲದೆ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲಿಲ್ಲ. ಇತ್ತೀಚೆಗೆ ಶಾಸಕರು 31 ವಾರ್ಡ್ ಗಳಿಗೆ ₹3.10 ಕೋಟಿ ಅನುದಾನ ತಂದಿದ್ದು ಅದರಲ್ಲಿ ಕೆಲವು ಅಭಿವೃದ್ಧಿ ನಡೆದಿದೆ’ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸದಸ್ಯರಾದ ಸತೀಶ್ ಕುಮಾರ್, ಕೃಷ್ಣರಾಜಗುಪ್ತ, ಶರವಣ, ಆಯುಕ್ತೆ ಮಾನಸ, ಎಇಇ ಶರ್ಮಿಳಾ, ಲೋಕೇಶ್, ವೆಂಕಟೇಶ್ (ಪಾಪು),ಬಾಬು ಭಾಗವಹಿಸಿದ್ದರು.
‘ಕ್ಷೇತ್ರದ ಶಾಸಕನಾದ ಬಳಿಕ ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಗೆ ₹ 70 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಿ ಪೌರಾಡಳಿತ ಸಚಿವರು ಈವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ರಾಜ್ಯದ ಎಸ್ಟಿಪಿ ಮತ್ತು ಟಿಎಸ್ಪಿ ಯೋಜನೆ ಅನುದಾನ ₹ 56 ಸಾವಿರ ಕೋಟಿ ಬಳಸಿಕೊಂಡು ಯೋಜನೆಗಳಿಗೆ ಅನುದಾನ ಇಲ್ಲವಾಗಿದೆ’ ಎಂದು ಜಿ.ಡಿ. ಹರೀಶ್ಗೌಡ ದೂರಿದರು.
‘ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಗೆ ₹ 2.70 ಲಕ್ಷ ಕೋಟಿ ಬಳಸಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸಿದ್ದಾರೆ. ಈ ಪ್ರಮಾಣದ ಅನುದಾನ ರಾಜ್ಯದ 225 ಕ್ಷೇತ್ರಕ್ಕೆ ನೀಡಿದ್ದರೆ ಅನುದಾನ ಕೊರತೆ ಇಲ್ಲದಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಹುದಿತ್ತು. ಆದರೆ ಹುಣಸೂರು ಕ್ಷೇತ್ರಕ್ಕೆ 2 ವರ್ಷದಲ್ಲಿ ₹ 75 ಲಕ್ಷ ಮಾತ್ರ ನೀಡಿದ್ದಾರೆ’ ಎಂದು ಲೇವಡಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.