
ಮೈಸೂರು: ಲಾಕ್ಡೌನ್ನ ಮೊದಲ ದಿನವಾದ ಬುಧವಾರ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆ 10ರ ನಂತರ ಎಲ್ಲ ಅಂಗಡಿ ಮುಂಗಟ್ಟುಗಳೂ ಮುಚ್ಚಿದವು. ಔಷಧ ಅಂಗಡಿಗಳು, ಪಾರ್ಸೆಲ್ ಸೇವೆ ನೀಡುವ ಕೆಲವು ಹೋಟೆಲ್ಗಳಷ್ಟೇ ತೆರೆದಿದ್ದ ದೃಶ್ಯಗಳು ನಗರದೆಲ್ಲೆಡೆ ಕಂಡು ಬಂದವು.
ಬೆಳಿಗ್ಗೆ 6 ಗಂಟೆಗೂ ಮುಂಚಿತ ವಾಗಿಯೇ ಸಾಕಷ್ಟು ಕಡೆ ವಾಣಿಜ್ಯ ಚಟುವಟಿಕೆಗಳು ಆರಂಭವಾದವು. ಹಾಲು, ತರಕಾರಿ, ಹಣ್ಣು, ದಿನಸಿ ಅಂಗಡಿಗಳು ತೆರೆದವು. ದೇವರಾಜ ಮಾರುಕಟ್ಟೆ ಸೇರಿದಂತೆ ನಗರದ ಹಲವು ಮಾರುಕಟ್ಟೆಗಳು ಜನರಿಂದ ತುಂಬಿತ್ತು. ವಾಯುವಿಹಾರಿಗಳೂ ಸೇರಿದಂತೆ ಜನರ ಓಡಾಟ ಬೆಳಿಗ್ಗೆ ಹೆಚ್ಚಾಗಿತ್ತು.
ಬೆಳಿಗ್ಗೆ 10 ಗಂಟೆಯ ನಂತರ ಅನೇಕ ಅಂಗಡಿಗಳವರು ಪೊಲೀಸರ ಸೂಚನೆಗೂ ಕಾಯದೇ ಬಾಗಿಲು ಮುಚ್ಚಿದರು. ಕೆಲವು ರಸ್ತೆಗಳಲ್ಲಿ ಪೊಲೀಸರು ಧ್ವನಿವರ್ಧಕದ ಮೂಲಕ ಅಂಗಡಿಗಳನ್ನು ಮುಚ್ಚುವಂತೆ ಸೂಚನೆ ನೀಡಿದರು. ದೇವರಾಜ ಮಾರುಕಟ್ಟೆಯ ಕೆಲವು ತರಕಾರಿ ಅಂಗಡಿ ಗಳ ಕೆಲಸ ಗಾರರಿಗೆ ಪೊಲೀಸರು ಲಾಠಿಯಿಂದ ಹೊಡೆದು, ಬಾಗಿಲು ಮುಚ್ಚಿಸಿದರು.
ನಂತರ, ಇಡೀ ನಗರ ಸ್ತಬ್ಧಗೊಂಡಿತು. ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಕಾವಲಿಗೆ ನಿಂತರು. ಹಲವು ರಸ್ತೆಗಳನ್ನು ಬ್ಯಾರಿಕೇಡ್ಗಳಿಂದಲೇ ಮುಚ್ಚಲಾಯಿತು. ಚಾಮರಾಜ ಜೋಡಿ ರಸ್ತೆ, ಸಯ್ಯಾಜಿ ರಾವ್ ರಸ್ತೆ, ಜೆಎಲ್ಬಿ ರಸ್ತೆ ಸೇರಿದಂತೆ ಅನೇಕ ಕಡೆ ರಸ್ತೆಯ ಒಂದು ಭಾಗದಲ್ಲಿ ಮಾತ್ರವೇ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಇನ್ನುಳಿದ ಭಾಗ ಗಳನ್ನು ಸಂಪೂರ್ಣ ಮುಚ್ಚಲಾಯಿತು.
ಸಂಚರಿಸುತ್ತಿದ್ದ ವಾಹನ ಸವಾರರನ್ನು ಪೊಲೀಸರು ತಡೆದು ಪರಿಶೀಲನೆ ನಡೆಸುತ್ತಿದ್ದ ದೃಶ್ಯಗಳು ಕಂಡು ಬಂದವು. ಗುರುತಿನ ಚೀಟಿ ಸೇರಿದಂತೆ ದಾಖಲಾತಿಗಳನ್ನು ಪರಿಶೀಲಿಸಿ ಬಿಡುತ್ತಿದ್ದವು. ಯಾವುದೇ ದಾಖಲೆಗಳಿಲ್ಲದೇ ರಸ್ತೆಗಿಳಿದವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು. ಮಧ್ಯಾಹ್ನದ ವೇಳೆ ಇಡೀ ನಗರಿ ಸ್ತಬ್ಧಗೊಂಡಿತು. ಕೆಎಸ್ಆರ್ಟಿಸಿ ಗ್ರಾಮಾಂತರ ಮತ್ತು ನಗರ ಬಸ್ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.
ಮಧ್ಯಾಹ್ನದ ನಂತರ ವಾಹನ ಸಂಚಾರ ತೀರಾ ಕಡಿಮೆಯಾದ್ದರಿಂದ ಪೊಲೀಸರೂ ಅಲ್ಲಲ್ಲಿ ಕುಳಿತು ವಿರಮಿಸಿ ಕೊಂಡರು. ಎಳನೀರಾಗಲಿ, ತಂಪು ಪಾನೀಯವಾಗಲಿ, ಮಜ್ಜಿಗೆಯಾಗಲಿ ಸಿಗದೇ ಪೊಲೀಸರು ಬಿಸಿಲಿನಲ್ಲಿ ಬಸವಳಿದರು.
ಸದಾ ವ್ಯಾಪಾರಿಗಳಿಂದಲೇ ಗಿಜಿಗುಡುತ್ತಿದ್ದ ಮಂಡಿ ಮೊಹಲ್ಲಾದ ರಸ್ತೆಗಳಲ್ಲಿ ಮಕ್ಕಳು ಕ್ರಿಕೆಟ್ ಆಟವಾಡಿದ್ದು ಗಮನ ಸೆಳೆಯಿತು.
ರಸ್ತೆಗಿಳಿದ ಕಮಿಷನರ್: ನಗರ ಪೊಲೀಸ್ ಕಮಿಷನರ್ ಚಂದ್ರಗುಪ್ತ ಅವರು ಬುಧವಾರ ಸ್ವತಃ ರಸ್ತೆಗಿಳಿದು ಪೊಲೀಸರು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ತುರ್ತು ಕಾರಣ ಇಲ್ಲದೇ ಅನಗತ್ಯವಾಗಿ ಸಂಚರಿಸು ವವರನ್ನು ಯಾವುದೇ ಕಾರಣಕ್ಕೂ ಬಿಡ ಬಾರದು ಎಂದು ಪೊಲೀಸರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.