ADVERTISEMENT

ಡಿ.ಜೆ.ಹಳ್ಳಿ ಗಲಭೆಗೆ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ: ತನ್ವೀರ್‌ ಸೇಠ್‌

ವೈಯಕ್ತಿಕವಾಗಿ ಟೀಕಿಸಿ-ಜಾತಿ, ಧರ್ಮದ ವಿಚಾರಕ್ಕೆ ಕೈ ಹಾಕಬೇಡಿ'

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 10:26 IST
Last Updated 12 ಆಗಸ್ಟ್ 2020, 10:26 IST
ತನ್ವೀರ್‌ ಸೇಠ್‌
ತನ್ವೀರ್‌ ಸೇಠ್‌   

ಮೈಸೂರು: ‘ಬೆಂಗಳೂರಿನ ಗಲಭೆಗೆ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ. ಇದು ತೀರಾ ದುರ್ಬಲಗೊಂಡಿದೆ’ ಎಂದು ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಬುಧವಾರ ಇಲ್ಲಿ ಟೀಕಿಸಿದರು.

‘ಮುಂದೆ ಏನಾಗುತ್ತದೆ ಎಂಬುದು ಗುಪ್ತಚರ ಇಲಾಖೆಗೆ ಗೊತ್ತಿರಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಸಾಕಷ್ಟು ಹಾನಿ ಆಗುವ ಸಾಧ್ಯತೆ ಇರುತ್ತದೆ. ವೈಫಲ್ಯದ ಬಗ್ಗೆ ಸರ್ಕಾರ ಕೂಡಲೇ ತನಿಖೆ ನಡೆಸಬೇಕು. ಗಲಭೆ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ವೈಯಕ್ತಿಕವಾಗಿ ಏನು ಬೇಕಾದರೂ ಟೀಕಿಸಿ, ನಾವು ಜೀವಂತವಾಗಿದ್ದೇವೆ ಉತ್ತರ ಕೊಡುತ್ತೇವೆ. ಆದರೆ, ಜಾತಿ, ಧರ್ಮದ ವಿಚಾರಕ್ಕೆ ಕೈ ಹಾಕಬೇಡಿ. ಜಾತಿ ವ್ಯವಸ್ಥೆಯು ಸಮಾಜವನ್ನು ಬೇರ್ಪಡಿಸಬಾರದು. ಶಾಂತಿ ಕಾಪಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಈಗಾಗಲೇ ಹಲವು ಆ್ಯಪ್‌ಗಳನ್ನು ನಿಷೇಧ ಮಾಡಲಾಗಿದೆ. ಇಂಥ ಕೆಲಸ ಮತ್ತಷ್ಟು ನಡೆಯಬೇಕು. ಸಾಮಾಜಿಕ ಜಾಲತಾಣಗಳಿಂದಾಗಿ ಸಮಾಜದ ವಾತಾವರಣ ಹದಗೆಡುತ್ತಿದೆ’ ಎಂದು ತಿಳಿಸಿದರು.

‘ಯುವಕರಿಗೆ ಉದ್ಯೋಗ ಇಲ್ಲ. ಉದ್ಯೋಗ ಇಲ್ಲದೇ ಇಂಥ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಿದೆ. ಆಗ ಇಂಥ ಚಟುವಟಿಕೆಗಳು ಕಡಿಮೆ ಆಗುತ್ತವೆ’ ಎಂದು ಸಲಹೆ ನೀಡಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.