ಮೈಸೂರು: ನವದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಸಂವಿಧಾನ ರಕ್ಷಣಾ ವೇದಿಕೆ ಹಾಗೂ ಇತರ ಸಂಘಟನೆಗಳ ವತಿಯಿಂದ ನಗರದಲ್ಲಿ ಮಂಗಳವಾರ ‘ಜನಗಣರಾಜ್ಯೋತ್ಸವ ನಡಿಗೆ’ ನಡೆಯಿತು.
ಸುಬ್ಬರಾಯರ ಕೆರೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಿಂದ ಮಹಾತ್ಮ ಗಾಂಧಿ ಚೌಕದವರೆಗೆ ನಡೆದ ಈ ನಡಿಗೆಯಲ್ಲಿ ಹಲವು ಮಂದಿ ಮುಖಂಡರು, ಮಹಿಳೆಯರು, ಕಾರ್ಮಿಕರು ಭಾಗಿಯಾದರು.
ಮಹಾತ್ಮ ಗಾಂಧಿ ಚೌಕದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿ ಸದಸ್ಯ ವಿಜಯಕುಮಾರ್, ‘ಪ್ರಭುತ್ವ ಮತ್ತು ಕಾರ್ಪೋರೇಟ್ ವಲಯವು ಗಣಗಳ ವಿರುದ್ಧ ತಂತ್ರಗಾರಿಕೆ ಮಾಡುತ್ತಿದೆ. ಇದೇ ಅವರ ಗಣತಂತ್ರವಾಗಿದೆ. ಆದರೆ, ನಮ್ಮದು ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳುವ ಗಣತಂತ್ರವಾಗಿದೆ’ ಎಂದು ತಿಳಿಸಿದರು.
ರಾಜ್ಯ ಸರ್ಕಾರಕ್ಕೆ ಸೇರಿದ ವಿಷಯವಾದ ಕೃಷಿಯಲ್ಲಿ ಕೇಂದ್ರ ಸರ್ಕಾರ ಈಗ ಮೂಗು ತೂರಿಸಿದೆ. ಇದರ ವಿರುದ್ಧ ನಡೆಯುತ್ತಿರುವ ರೈತರ ಹೋರಾಟಗಳನ್ನು ಅಸಂವಿಧಾನಿಕ ಮಾರ್ಗಗಳ ಮೂಲಕ ಹತ್ತಿಕ್ಕಲು ಹೊರಟಿದೆ ಎಂದು ಅವರು ದೂರಿದರು.
ನವದೆಹಲಿಯಲ್ಲಿ ನಡೆದ ರೈತರ ಗಣತಂತ್ರ ಪರೇಡ್ ನಿಜಕ್ಕೂ ಇತಿಹಾಸ ನಿರ್ಮಿಸಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯ ಪರಿಣಾಮವೇ ಇದಾಗಿದೆ ಎಂದರು.
ಮುಖಂಡರಾದ ಎಚ್.ಆರ್.ಶೇಷಾದ್ರಿ, ರತಿರಾವ್, ಉಗ್ರನರಸಿಂಹೇಗೌಡ, ಚೌಡಳ್ಳಿ ಜವರಯ್ಯ, ಶಬ್ಬೀರ್ ಮುಸ್ತಫಾ, ಸುನಂದಾ, ಚಿಕ್ಕಣ್ಣೇಗೌಡ, ಎಂ.ಎಫ್.ಕಲೀಂ, ಜೆ.ಸುರೇಶ್, ಲ.ಜಗನ್ನಾಥ್, ನಾ.ದಿವಾಕರ, ಸುಮನಾ, ಜಗದೀಶ್ ಸೂರ್ಯ, ಜಯರಾಂ, ಲಕ್ಷ್ಮೀನಾರಾಯಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.