ADVERTISEMENT

ಉದ್ಯೋಗಕ್ಕೆ ಅರ್ಜಿ: ಸ್ವಂತಿಕೆ ಇರಲಿ; ಮೊಹ್ಮದ್‌ ಝೀಶನ್‌

ಲಿಂಕ್ಡ್‌ಇನ್‌ನಲ್ಲಿ ಪ್ರೊಫೈಲ್‌ ಬರವಣಿಗೆ ಕಾರ್ಯಾಗಾರ: ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 2:46 IST
Last Updated 4 ಫೆಬ್ರುವರಿ 2026, 2:46 IST
ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಮಂಗಳವಾರ ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಸಹಯೋಗದಲ್ಲಿ ಇಂಗ್ಲಿಷ್ ವಿಭಾಗದ ಐಕ್ಯುಎಸಿ ಘಟಕವು ಏರ್ಪಡಿಸಿದ್ದ ‘ಲಿಂಕ್ಡ್‌ಇನ್‌ನಲ್ಲಿ ಪ್ರೊಫೈಲ್‌ ಬರವಣಿಗೆ ಕಾರ್ಯಾಗಾರ’ದಲ್ಲಿ ತರಬೇತುದಾರರಾದ ಮೊಹ್ಮದ್‌ ಝೀಶನ್‌ ಉಪನ್ಯಾಸ ನೀಡಿದರು
ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಮಂಗಳವಾರ ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಸಹಯೋಗದಲ್ಲಿ ಇಂಗ್ಲಿಷ್ ವಿಭಾಗದ ಐಕ್ಯುಎಸಿ ಘಟಕವು ಏರ್ಪಡಿಸಿದ್ದ ‘ಲಿಂಕ್ಡ್‌ಇನ್‌ನಲ್ಲಿ ಪ್ರೊಫೈಲ್‌ ಬರವಣಿಗೆ ಕಾರ್ಯಾಗಾರ’ದಲ್ಲಿ ತರಬೇತುದಾರರಾದ ಮೊಹ್ಮದ್‌ ಝೀಶನ್‌ ಉಪನ್ಯಾಸ ನೀಡಿದರು   

ಮೈಸೂರು: ‘ಉದ್ಯೋಗಾವಕಾಶ ಕೋರಿ ಸಲ್ಲಿಸುವ ಅರ್ಜಿಯಲ್ಲಿ ಸ್ವಂತಿಕೆ ಇದ್ದರಷ್ಟೇ ನಿರೀಕ್ಷಿತ ಯಶಸ್ಸು ಸಿಗುತ್ತದೆ’ ಎಂದು ತರಬೇತುದಾರರಾದ ಮೊಹ್ಮದ್‌ ಝೀಶನ್‌ ಸಲಹೆ ನೀಡಿದರು.

ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಮಂಗಳವಾರ ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಸಹಯೋಗದಲ್ಲಿ ಇಂಗ್ಲಿಷ್ ವಿಭಾಗದ ಐಕ್ಯುಎಸಿ ಘಟಕವು ಏರ್ಪಡಿಸಿದ್ದ ‘ಲಿಂಕ್ಡ್‌ಇನ್‌ನಲ್ಲಿ ಪ್ರೊಫೈಲ್‌ ಬರವಣಿಗೆ ಕಾರ್ಯಾಗಾರ’ದಲ್ಲಿ ‘ಲಿಂಕ್ಡ್‌ಇನ್ ಪ್ರೊಫೈಲ್‌ ಮೇಕ್‌ಓವರ್‌; ಅನ್‌ಲಾಕ್‌ ಯುವರ್‌ ಕರಿಯರ್‌ ಆನ್‌ಲೈನ್‌’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

‘ಉದ್ಯೋಗಕ್ಕಾಗಿ ಸಲ್ಲಿಸುವ ಅರ್ಜಿಯನ್ನು ಸ್ವಂತ ವಿವರಗಳೊಂದಿಗೆ ಬರೆಯುವುದು ಬಹಳ ಮುಖ್ಯ. ಆದರೆ ಬಹುತೇಕರು ಇತರರು ಸಿದ್ಧಪಡಿಸಿದ ಅರ್ಜಿಯ ಎಲ್ಲ ಮಾಹಿತಿಗಳನ್ನು ಹಾಗೇ ಉಳಿಸಿಕೊಂಡು, ತಮ್ಮ ಹೆಸರನ್ನಷ್ಟೇ ಬದಲಾಯಿಸಿ ನೀಡುವ ಕೆಟ್ಟ ಪರಿಪಾಠವಿದೆ. ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ’ ಎಂದರು.

ADVERTISEMENT

‘ವಿದ್ಯಾರ್ಥಿಯೊಬ್ಬರು ತಮ್ಮ ಹಿರಿಯರೊಬ್ಬರ ಅರ್ಜಿಯನ್ನೇ ಕಾಪಿ ಮಾಡಿ ಕೊಟ್ಟಿದ್ದರು. ಅದರೆ ಅದರಲ್ಲಿ ತಮ್ಮ ತಂದೆಯ ಹೆಸರು ಬರೆಯಬೇಕೆಂಬ ಕನಿಷ್ಠ ತಿಳಿವಳಿಕೆಯೂ ಇರಲಿಲ್ಲ. ಇಂಥ ಪ್ರಯತ್ನಗಳಿಂದ ನಿಮ್ಮ ಬಗ್ಗೆ ಉದ್ಯೋಗದಾತರಲ್ಲಿ ಕೆಟ್ಟ ಅಭಿಪ್ರಾಯ ಮೂಡುವುದು ಖಚಿತ’ ಎಂಬ ಎಚ್ಚರಿಕೆಯನ್ನೂ ನೀಡಿದರು. 

‘ಸಿವಿ (curriculum vitae) ಎಂದರೆ ಉದ್ಯೋಗಾಕಾಂಕ್ಷಿಯ ಶೈಕ್ಷಣಿಕ ಅರ್ಹತೆಗಳಿಗೆ ಆದ್ಯತೆ ನೀಡುವ ಅರ್ಜಿ. ರೆಸ್ಯೂಮ್‌ (resume) ಎಂದರೆ ಶೈಕ್ಷಣಿಕ ಅರ್ಹತೆಗಳ ಜೊತೆಗೆ ಉದ್ಯೋಗದ ಕುರಿತ ಅನುಭವಗಳ ಮಾಹಿತಿಯೂ ಇರುವ ಅರ್ಜಿ. ಈ ಎರಡರ ನಡುವಿನ ವ್ಯತ್ಯಾಸವನ್ನು ವಿದ್ಯಾರ್ಥಿಗಳು ಅರಿಯಬೇಕು. ಆಗ ಮಾತ್ರ ಬಯಸುವ ಉದ್ಯೋಗಕ್ಕೆ ತಕ್ಕಂತೆ ಅರ್ಜಿಯನ್ನು ಸಿದ್ಧಪಡಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಲಿಂಕ್ಡ್‌ ಇನ್‌ನಲ್ಲಿ ನಿಮ್ಮ ಸ್ವವಿವರವನ್ನು ನೀಡಿ, ಉದ್ಯೋಗದಾತರ ಗಮನ ಸೆಳೆಯಲು ವಿಫುಲ ಅವಕಾಶಗಳಿವೆ. ಅವುಗಳ ಬಗ್ಗೆ ಈಗಿನಿಂದಲೇ ಪದವಿ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ಅರ್ಜಿಗಳು ನಿಮ್ಮ ಗೈರುಹಾಜರಿಯಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತವೆ ಎಂಬುದನ್ನು ಮರೆಯಬೇಡಿ. ಹೀಗಾಗಿ ಸಮರ್ಥವಾಗಿ, ಸಮರ್ಥವಾಗಿ ಸ್ವವಿವರಗಳನ್ನು ದಾಖಲಿಸಿ‘ ಎಂದರು.

ಡೆಕ್ಕನ್‌ ಹೆರಾಲ್ಡ್‌ ಬ್ಯೂರೋ ಮುಖ್ಯಸ್ಥ ಟಿ.ಆರ್‌.ಸತೀಶ್‌ಕುಮಾರ್‌ ಪ್ರಾಸ್ತಾವಿಕ ಮಾತನಾಡಿದರು. ‘ಪ್ರಜಾವಾಣಿ’ ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್‌.ಪ್ರಕಾಶ್‌, ಪ್ರಾಂಶುಪಾಲರಾದ ಕೆ.ಸೌಮ್ಯ ಈರಪ್ಪ, ವಿಭಾಗದ ಮುಖ್ಯಸ್ಥ ಜೋಸೆಫ್‌ ಮ್ಯಾಥ್ಯು, ಸಹಾಯಕ ಪ್ರಾಧ್ಯಾಪಕಿ ಹಾಗೂ ಕಾರ್ಯಾಗಾರದ ಸಂಯೋಜಕಿ ಬಿ.ಎನ್.ಮಂಜುಳಾ, ಐಕ್ಯುಎಸಿ– ಪ್ಲೇಸ್‌ಮೆಂಟ್‌ ವಿಭಾಗದ ಸಂಯೋಜಕಿ ಮೃದುಲಾ ಸೋಜನ್ ಪಾಲ್ಗೊಂಡಿದ್ದರು.