ಮೈಸೂರು: ‘ವೀರು ಥಿಯೇಟರ್ ಟ್ರಸ್ಟ್ ಸಹಯೋಗದಲ್ಲಿ ಆ.6ರಂದು ಸಂಜೆ 7ಕ್ಕೆ ನಗರದ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ‘ಕಲಾವಿದ’ ಏಕವ್ಯಕ್ತಿ ರಂಗ ಪ್ರಯೋಗ ಹಮ್ಮಿಕೊಳ್ಳಲಾಗಿದೆ’ ಎಂದು ರಂಗ ಕಲಾವಿದ, ನಿರ್ದೇಶಕ ಶ್ರೇಯಸ್ ಪಿ. ತಿಳಿಸಿದರು.
‘ವೀರು ಅಣ್ಣಿಗೇರಿ ರಚನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ನಾನು 15 ಪಾತ್ರಗಳಲ್ಲಿ ನಟಿಸಲಿದ್ದೇನೆ. ಮಹೇಶ್ ಕಲ್ಲತ್ತಿ ಬೆಳಕು ನೀಡಿದ್ದಾರೆ. ₹ 100 ಪ್ರವೇಶ ದರ ನಿಗದಿಪಡಿಸಲಾಗಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಕೋವಿಡ್ ಲಾಕ್ಡೌನ್ ಸಂಕಷ್ಟದ ಸಮಯದಲ್ಲಿ ಕಲಾವಿದರು ಎದುರಿಸಿದ ಸಂಕಷ್ಟವನ್ನು ನಾಟಕದಲ್ಲಿ ಬಿಂಬಿಸಲಾಗಿದೆ. ಕಲಾವಿದನು ರೈಲು ನಿಲ್ದಾಣದಲ್ಲಿ ಪಾಪ್ಕಾರ್ನ್ ಮಾರಿ ಜೀವನ ನಡೆಸಲು ಶುರು ಮಾಡುತ್ತಾನೆ. ಅಲ್ಲಿ ಅವನಿಗೆ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತು, ರಂಗಭೂಮಿಗೆ ಮರಳುವುದೇ ಕಥಾಹಂದರವಾಗಿದೆ. ಒಂದು ತಾಸಿನಲ್ಲಿ ಕಲಾವಿದರ ಬವಣೆಗಳನ್ನು ಕಟ್ಟಿಕೊಡಲಾಗುವುದು’ ಎಂದು ತಿಳಿಸಿದರು.
ವೀರಭದ್ರಪ್ಪ ಅಣ್ಣಿಗೇರಿ, ಡಾ.ಬೆಟ್ಟಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.