ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಜೆ.ಕೆ.ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ ‘ಸಂಸ್ಕೃತಿ–22’ ಸಂಗೀತ ಸಂಜೆಗೆ ಚಲನಚಿತ್ರ ನಟ ಶಿವರಾಜ್ ಕುಮಾರ್ ಶುಕ್ರವಾರ ಚಾಲನೆ ನೀಡಿದರು.
ನಂತರ ಮಾತನಾಡಿ, ‘ಡಾಕ್ಟರ್ ಎಂಬ ಪದಕ್ಕೂ ನಮ್ಮ ಕುಟುಂಬಕ್ಕೂ ಬಹಳ ಸಂಬಂಧವಿದೆ. ನಮ್ಮ ಮನೆಯಲ್ಲಿ ಬಹಳ ಮಂದಿ ಡಾಕ್ಟರ್ ಇದ್ದಾರೆ. ನನ್ನ ಪುತ್ರಿ ಮೈಸೂರಿನಲ್ಲಿಯೇ ಎಂಬಿಬಿಎಸ್ ಪದವಿ ಪಡೆದಿದ್ದಾಳೆ. ತಂದೆಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಿದೆ’ ಎಂದು ಹೇಳಿದರು.
‘ಮೈಸೂರಿಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಅಪ್ಪಾಜಿಗೆ ಮೈಸೂರು ನಗರವಂದರೆ ಅಚ್ಚುಮೆಚ್ಚು. ಇಲ್ಲಿನ ಕಾಫಿ, ಬಿರಿಯಾನಿ ಇಷ್ಟ. ವಾತಾವರಣವೂ ಚೆನ್ನಾಗಿದೆ. ಎಲ್ಲರೂ ಆರಾಮವಾಗಿ ಜೀವನ ನಡೆಸಲು ಸಾಧ್ಯವಿದೆ. ತಂದೆ ಪದ್ಮವಿಭೂಷಣ ಪಡೆದಾಗ ಇಲ್ಲಿ ಅಭಿನಂದನೆ ಸ್ವೀಕರಿಸಿದ್ದರು. ಜೇನಿನ ಹೊಳೆಯೋ, ಹಾಲಿನ ಮಳೆಯೋ ಗೀತೆಯನ್ನು ಅವರು ಹಾಡಿದ್ದರು. ಅದೆಲ್ಲವೂ ನೆನಪಾಗುತ್ತಿದೆ’ ಎಂದು ನೆನೆದರು.
ಚಿತ್ರಗೀತೆಗಳನ್ನು ಹಾಡಿ, ಕೆಲವು ಡೈಲಾಗ್ಗಳನ್ನು ಹೇಳಿ, ನೃತ್ಯ ಮಾಡಿ ರಂಜಿಸಿದರು.
ಸಂಸ್ಥೆಯ ಡೀನ್ ಹಾಗೂ ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.