ಮೈಸೂರು: ಹಾಲಿ ಸೈನಿಕರಿಗೆ ಹಾಗೂ ಮಾಜಿ ಸೈನಿಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಶುಲ್ಕ ಇಲ್ಲದೇ ನೀಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ತಿಳಿಸಿದರು.
ಇಲ್ಲಿನ ಕಲಾಮಂದಿರದಲ್ಲಿ 'ಧಾತ್ರಿ'ಪ್ರಕಾಶನ ಭಾನುವಾರ ಏರ್ಪಡಿಸಿದ್ದ ಎಸ್.ಉಮೇಶ್ ಅವರ ‘ಸಿಯಾಚಿನ್’ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಪರಿಷತ್ತಿನ ಸದ್ಯಸತ್ವ ಸಂಖ್ಯೆಯನ್ನು ಒಂದು ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.ದೇಶಕ್ಕೆ ಬಿಕ್ಕಟ್ಟು ಬಂದಾಗ ನೆನಪಿಸಿಕೊಳ್ಳುವುದು ಸೈನಿಕರನ್ನು. ಆದರೆ, ಬಿಕ್ಕಟ್ಟು ನಿವಾರಣೆಯಾದಾಗ ಅವರನ್ನು ಮರೆತುಬಿಡುವುದು ಸರಿಯಲ್ಲ ಎಂದರು.
ಸೈನಿಕರು ತಮ್ಮ ನಾಳೆಯನ್ನು ನಮಗಾಗಿ ಇಂದೇ ತ್ಯಾಗ ಮಾಡುತ್ತಾರೆ. 1962 ರಲ್ಲಿ ದೇಶದಲ್ಲಿ ಜನರು ದೀಪಾವಳಿ ಆಚರಿಸುತ್ತಿದ್ದರೆ ಗಡಿಯಲ್ಲಿ ನಮ್ಮ ಸೈನಿಕರು ಚೀನಿಯರೊಂದಿಗೆ ರಕ್ತದೋಕುಳಿಯಾಡುತ್ತಿದ್ದರು ಎಂದು ಹೇಳಿದರು.
ಸಾಹಿತಿ ಪ್ರಧಾನ್ ಗುರುದತ್ ಮಾತನಾಡಿ, ಗೃಹ ಸಚಿವಾಲಯದ ಅನುಮತಿ ಪಡೆದು ಸಿಯಾಚಿನ್ ಗೆ ತೆರಳಿ ಈ ಕೃತಿ ರಚಿಸಿದ್ದಾರೆ. ನಮ್ಮ ಕಣ್ಣಿಗೆ ಕಟ್ಟುವಂತೆ ಅಲ್ಲಿನ ಚಿತ್ರಣವನ್ನು ನಮಗೆ ಕಟ್ಟಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಪುಸ್ತಕ ಬಿಡುಗಡೆ ಮಾಡಿದ ಸಾಹಿತಿ ಎಸ್.ಎಲ್.ಭೈರಪ್ಪ ಮಾತನಾಡಿ, ಪುಸ್ತಕಗಳನ್ನು ಖರೀದಿಸಿ ಓದಬೇಕು. ಸಿಯಾಚಿನ್ ಪುಸ್ತಕ ಉಡುಗೊರೆ ನೀಡುವುದಕ್ಕೆ ಸೂಕ್ತ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.