
ಮೈಸೂರಿನ ಇಟ್ಟಿಗೆಗೂಡು ನಿವಾಸಿ ಲಿಂಗರಾಜು ಕೆ.
ಮೈಸೂರು: ‘ಕೆಲವು ಗಂಟೆ ಎಲ್ಲವೂ ಶಾಂತಸ್ಥಿತಿ ಇರುತ್ತದೆ. ಯಾವಾಗ ಬಾಂಬ್ ಸ್ಫೋಟವಾಗುತ್ತದೆ, ಸೈರನ್ ಮೊಳಗುತ್ತದೆ, ಎಚ್ಚರಿಕೆಯ ಸಂದೇಶ ಬರುತ್ತದೆ ಎಂಬುದನ್ನು ಹೇಳಲಾಗದಂತಿದೆ. ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಎಂಬ ಭೀತಿ ಇದೆ...’
ಸದ್ಯ ಬಹರೇನ್ನಲ್ಲಿರುವ ಮೈಸೂರಿನ ಇಟ್ಟಿಗೆಗೂಡು ನಿವಾಸಿ ಲಿಂಗರಾಜು ಕೆ. ಅವರ ಆತಂಕದ ಮಾತುಗಳಿವು.
ಇಸ್ರೇನ್–ಇರಾನ್ ನಡುವಿನ ಯುದ್ಧದಿಂದಾಗಿ ನಲುಗಿರುವ ಬಹರೇನ್ನಲ್ಲಿರುವ ಅವರು ಅಲ್ಲಿನ ಪರಿಸ್ಥಿತಿಯನ್ನು ಬಿಚ್ಚಿಟ್ಟರು. ‘ಪ್ರಧಾನಿ ನರೇಂದ್ರ ಮೋದಿ ಅವರು, ಬಹರೇನ್ನಲ್ಲಿರುವ ನಮ್ಮಂತಹ ಭಾರತೀಯ ಮೂಲದವರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಬೇಕು’ ಎಂದು ಕೋರಿದರು.
ಮೈಸೂರು ಜಯನಗರ ಬಲಿಜ ಸಂಘದ ಉಪಾಧ್ಯಕ್ಷ ಹಾಗೂ ದ್ವಿಚಕ್ರವಾಹನ ಮೆಕ್ಯಾನಿಕ್ಗಳ ಸಂಘದ ಕಾರ್ಯದರ್ಶಿಯಾಗಿದ್ದ ಅವರು, 2024ರ ಅಕ್ಟೋಬರ್ನಿಂದ ಮನಾಮದಲ್ಲಿ ‘ಪ್ಯಾಪಿಲೋನ್’ ಎಂಬ ಹೆಸರಿನ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಯುದ್ಧ ಪರಿಸ್ಥಿತಿಯಿಂದಾಗಿ ಕಾರಣದಿಂದಾಗಿ ರೆಸ್ಟೊರೆಂಟ್ ಮುಚ್ಚಿದ್ದಾರೆ.
‘ಇಸ್ರೇಲ್–ಇರಾನ್ ಯುದ್ಧದಿಂದಾಗಿ ಬಹರೇನ್ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ನಾವೆಲ್ಲರೂ ಭೀತಿಗೆ ಒಳಗಾಗಿದ್ದೇವೆ. ಇಲ್ಲಿರುವ ಅಮೆರಿಕದ ಸೇನಾ ನೆಲೆಗಳಿಗೆ ಬಾಂಬ್ ಬೀಳುತ್ತಿವೆ. ಸದ್ಯ ನಾನು ಮಾವೋಸ್ನಲ್ಲಿ ಸ್ನೇಹಿತರೊಬ್ಬರ ಬಂಗಲೆಯಲ್ಲಿದ್ದೇನೆ. ವಿಮಾನಗಳ ಹಾರಾಟ ರದ್ದಾಗಿರುವುದರಿಂದ ವಾಪಸಾಗಲು ಸಾಧ್ಯವಾಗುತ್ತಿಲ್ಲ. ಸುತ್ತಮುತ್ತ ಅಲ್ಲಲ್ಲಿ ಬಾಂಬ್ ಬೀಳುತ್ತಿರುವುದು ಕಂಡುಬರುತ್ತಲೇ ಇದೆ. ದಟ್ಟ ಹೊಗೆಯ ವಾತಾವರಣ ಕಾಣಿಸುತ್ತಿದೆ’ ಎಂದು ತಿಳಿಸಿದರು.
‘ವಾರದ ಹಿಂದೆಯಷ್ಟೇ ಮೈಸೂರಿಗೆ ಬಂದು ವಾಪಸಾಗಿದ್ದೆ. ನನ್ನೊಂದಿಗೆ ಬಂದಿದ್ದ ಕುಟುಂಬದವರು ಮೈಸೂರಿನಲ್ಲೇ ಉಳಿದಿದ್ದಾರೆ. ಅವರೆಲ್ಲರಿಗೂ ನಮ್ಮ ಸುರಕ್ಷತೆಯ ಬಗ್ಗೆ ಆತಂಕ ಉಂಟಾಗಿದೆ. ಸರ್ಕಾರಗಳು ನಮ್ಮ ನೆರವಿಗೆ ಬರಬೇಕು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.