ADVERTISEMENT

6.5 ಕೋಟಿ ಕನ್ನಡಿಗರ ನಾಡಹಬ್ಬ ದಸರಾ: ಸೋಮಣ್ಣ

‘ಕುಮಾರಸ್ವಾಮಿ ಅವರೇ ನಿಮ್ಮನ್ನು ಟೀಕಿಸಲ್ಲ; ನೀವೇ ಆತ್ಮಾವಲೋಕನ ಮಾಡಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 14:58 IST
Last Updated 13 ಸೆಪ್ಟೆಂಬರ್ 2019, 14:58 IST

ಮೈಸೂರು: ‘ದಸರಾ ಅಧಿಕಾರಿಗಳಿಗೆ ಸೀಮಿತವಾದ ಹಬ್ಬವಲ್ಲ. ಆರೂವರೆ ಕೋಟಿ ಕನ್ನಡಿಗರ ನಾಡಹಬ್ಬ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದನ್ನು ಅರಿಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶುಕ್ರವಾರ ಇಲ್ಲಿ ತಿರುಗೇಟು ನೀಡಿದರು.

ನಗರದ ಮುಡಾ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಆರಂಭಿಸಿದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವರು, ‘ವಸತಿ ಖಾತೆ ನನಗೇನು ಹೊಸತಲ್ಲ. ನಾನು 1983ರಲ್ಲೇ ರಾಜಕೀಯ ಪ್ರವೇಶಿಸಿದವನು. ಅದೃಷ್ಟವಿಲ್ಲ. ಮುಖ್ಯಮಂತ್ರಿಯಾಗಿಲ್ಲ, ಸಚಿವನಾಗಿದ್ದೇನಷ್ಟೇ’ ಎಂದು ಹೇಳಿದರು.

‘ನಾನೇನು ಎಲ್‌ ಬೋರ್ಡ್‌ನವಲ್ಲ. ಕುಮಾರಸ್ವಾಮಿಗೆ ಅದೃಷ್ಟವಿತ್ತು. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರಷ್ಟೇ. ಇಲ್ಲಿ ಯಾರೂ ದೊಡ್ಡವರಿಲ್ಲ. ದಸರಾ ಆಚರಣೆಗಾಗಿ ಎಲ್ಲರ ಸಹಕಾರ ಕೇಳಿರುವೆ, ಸಲಹೆ ಪಡೆದಿರುವೆ. ನೀವೂ ಏನಾದರೂ ಸಲಹೆ ಕೊಡಿ. ಕಾರ್ಯರೂಪಕ್ಕೆ ತರುವೆ’ ಎಂದು ಛೇಡಿಸಿದರು.

ADVERTISEMENT

‘14 ತಿಂಗಳ ನಿಮ್ಮ ಆಡಳಿತದ ವೈಖರಿ ಹೇಗಿತ್ತು ಎಂಬುದನ್ನೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ನಾನು ನಿಮ್ಮನ್ನು ಟೀಕಿಸಲ್ಲ. ವಸತಿ ಖಾತೆಯಲ್ಲಿ ಹಳಬನಿರುವೆ. ಪ್ರವಾಹ ಸಂತ್ರಸ್ತರಿಗೆ ನೆರವು ಒದಗಿಸಲು, ಮನೆ ಕಟ್ಟಿಕೊಡುವ ಕಾರ್ಯಾಚರಣೆ ಈಗಾಗಲೇ ನಡೆದಿದೆ. ಈ ವಿಷಯದಲ್ಲಿ ಹೆಚ್ಚಿನ ಚರ್ಚೆ ಬೇಡ. ಅಂಕಿ–ಅಂಶ ನನ್ನ ಬಳಿಯೂ ಇವೆ’ ಎಂದು ಸೋಮಣ್ಣ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.

‘ಜಿ.ಟಿ.ದೇವೇಗೌಡ ಈ ಭಾಗದ ಪ್ರಭಾವಿ ನಾಯಕರು. ಇವರ ಜತೆ ಸಾ.ರಾ.ಮಹೇಶ್‌, ತನ್ವೀರ್‌ ಸೇಠ್‌, ಕೆ.ಮಹದೇವ್‌, ಎಚ್‌.ಸಿ.ಮಹದೇವಪ್ಪ, ವಿ.ಶ್ರೀನಿವಾಸ್‌ ಪ್ರಸಾದ್‌ ಸೇರಿದಂತೆ ದಸರಾ ಆಚರಣೆಗಾಗಿ ಎಲ್ಲರ ಸಲಹೆ ಪಡೆದಿರುವೆ’ ಎಂದು ವಸತಿ ಸಚಿವರು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.