ಕೆ.ಆರ್.ನಗರ: ತಾಲ್ಲೂಕಿನ ಕಪ್ಪಡಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ರಚಿಸದಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಭಕ್ತರು ಇಲ್ಲಿನ ತಾಲ್ಲೂಕು ಆಡಳಿತ ಸೌಧ ಆವರಣದಲ್ಲಿ ಗುರುವಾರ ಪ್ರತಿಭಟನೆ ಮಾಡಿದರು.
ಭಕ್ತಾದಿಗಳು ಮಾತನಾಡಿ, ‘ವಿಭಿನ್ನ ಪರಂಪರೆ ಹೊಂದಿರುವ ಬೊಪ್ಪೇಗೌಡನಪುರ, ಮುತ್ತನಹಳ್ಳಿ, ಚಿಕ್ಕಲ್ಲೂರು, ಕುರುಬನಕಟ್ಟೆ, ಕಪ್ಪಡಿ ಕ್ಷೇತ್ರ, ಮಳವಳ್ಳಿ, ಆದಿ ಹೊನ್ನಾಯಕನಹಳ್ಳಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕರ್ನಾಟಕ ಸರ್ಕಾರ ಮುಂದಾಗಿರುವುದು ವಿಷಾದನೀಯ. ಇದು ಮಠದ ಭಕ್ತರು ಮತ್ತು ನೀಲಗಾರ ಭಕ್ತರ ಮನಸ್ಸಿಗೆ ಅತ್ಯಂತ ತೀವ್ರ ನೋವುಂಟು ಮಾಡಿದೆ’ ಎಂದು ಹೇಳಿದರು.
‘500 ವರ್ಷಗಳಿಂದ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ ಚನ್ನಪಟ್ಟಣ, ರಾಮನಗರ, ಬೆಂಗಳೂರು, ಶಿವಮೊಗ್ಗ, ಯಾದಗಿರಿ ಸೇರಿದಂತೆ ರಾಜ್ಯದ ವಿವಿಧ ಭಾಗದ 18ಕ್ಕೂ ಹೆಚ್ಚು ಕೋಮಿನ ಭಕ್ತರು ಮಂಟೇಸ್ವಾಮಿ, ಬೊಪ್ಪೇಗೌಡನಪುರ, ಮಳವಳ್ಳಿ ಮಠಗಳ ಧರ್ಮ ಗುರುವಿನ ದೀಕ್ಷೆ ಪಡೆದಿರುತ್ತಾರೆ’ ಎಂದರು.
‘ಮಠಗಳು ಸರ್ಕಾರದ ಯಾವುದೇ ದೇಣಿಗೆಯನ್ನಾಗಲೀ ಅಥವಾ ಹಣಕಾಸಿನ ಸಹಾಯವನ್ನು ಪಡೆಯದೇ ಭಕ್ತರು ಮತ್ತು ನೀಲಗಾರ ಸಹಾಯದಿಂದ ನಡೆದುಕೊಂಡು ಬರುತ್ತಿದೆ. ಪರಂಪರೆಯ ಮೂಲ ಸೊಗಡಿನ ಉಳಿವಿಗಾಗಿ, ನೀಲಗಾರರ, ಲಕ್ಷಾಂತರ ಭಕ್ತಾಧಿಗಳ ಹಿತದೃಷ್ಟಿಯಿಂದ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಅಭಿವೃದ್ಧಿ ಪ್ರಾಧಿಕಾರ ರಚನೆ ಕೈಬಿಡಬೇಕು’ ಎಂದು ಒತ್ತಾಯಿಸಿ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಚಿಕ್ಕಲ್ಲೂರು ಮಂಟೇಸ್ವಾಮಿ ಮಠದ ಧರ್ಮಾಧಿಕಾರಿ ಬಿ.ಪಿ.ಭರತ್ ಅರಸ್, ತಾಲ್ಲೂಕಿನ ಡಿ.ಕೆ.ಕೊಪ್ಪಲು ಅಪ್ಪಾಜಿಗೌಡ, ಚಂದಗಾಲು ರಾಮಲಿಂಗು, ಶ್ರೀಧರ್, ಜಗದೀಶ್, ರಾಮಚಂದ್ರ, ಸಿ.ಕೆ.ರಾಮಕೃಷ್ಣ, ಹೆಬ್ಬಾಳು ಹರೀಶ್, ಕೆಂಪೇಗೌಡ, ರಾಮಚಂದ್ರೇಗೌಡ, ವೆಂಕಟರಾಮು, ಹೆಬ್ಬಾಳು ರವಿ, ಕಲ್ಕುಣಿಕೆ ಉಮೇಶ್, ಕೇಶವ, ಹೊಸಕೊಪ್ಪಲು ಅಪ್ಪಾಜಿಗೌಡ, ಧನಂಜಯ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಂಬೇಡ್ಕರ್ ವೃತ್ತದಿಂದ ತಾಲ್ಲೂಕು ಆಡಳಿತ ಸೌಧದವರೆಗೆ ಮೆರವಣಿಗೆಯಲ್ಲಿ ಭಕ್ತಾದಿಗಳು ಕಂಡಾಯದೊಂದಿಗೆ ಪಾಲ್ಗೊಂಡಿದ್ದರು.