ಮೈಸೂರು: ‘ಐ.ಟಿ ಅಸ್ತ್ರ ಬಳಸಿ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ ಅವರ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸಿದೆ. ಸಿದ್ದರಾಮಯ್ಯ ಅವರ ಮೇಲೂ ದಾಳಿಗೆ ಸಂಚು ರೂಪಿಸಿದೆ. ಆದರೆ, ಅವರನ್ನು ಟಚ್ ಮಾಡಿದರೆ ರಾಜ್ಯದ ಜನ ಸುಮ್ಮನಿರಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ಇಲ್ಲಿ ಎಚ್ಚರಿಸಿದರು.
‘ದೇಶದ ಮಾಧ್ಯಮಗಳೂ ಅವರಿಗೆ ಶರಣಾಗಿವೆ. ಬಿಜೆಪಿ ವಿರುದ್ಧ ಹೋದರೆ ಮಾಧ್ಯಮಗಳ ಪರವಾನಗಿ ರದ್ದು ಮಾಡಿ ಸರ್ಕಾರಿ ಸಂಸ್ಥೆಗಳ ಮೇಲೆ ಮೂಲಕ ದಾಳಿ ನಡೆಸುತ್ತಾರೆ. ಕೆಲ ವಾಹಿನಿಗಳ ಮೇಲೆ ಈಗಾಗಲೇ ಸಿಬಿಐ ದಾಳಿ ನಡೆದಿದೆ. ನೂರಾರು ಕೋಟಿ ಬಂಡವಾಳ ಹಾಕಿರುವ ಮಾಧ್ಯಮಗಳು ಸಹಜವಾಗಿಯೇ ಹೆದರುತ್ತವೆ. ಈಗಂತೂ ಸುಪ್ರೀಂ ಕೋರ್ಟ್ ಮೇಲೂ ನಂಬಿಕೆ ಕಡಿಮೆಯಾಗಿದೆ’ ಎಂದರು.
ಅದಕ್ಕೆ ದನಿಗೂಡಿಸಿದ ಕಾಂಗ್ರೆಸ್ ಮುಖಂಡ, ಪಿರಿಯಾಪಟ್ಟಣ ಮಾಜಿ ಶಾಸಕ ಕೆ.ವೆಂಕಟೇಶ್, ‘ಸಿದ್ದರಾಮಯ್ಯ ಅವರ ಮೇಲೆ ದಾಳಿ ನಡೆಸಿದರೆ ಏನೂ ಸಿಗುವುದಿಲ್ಲ. ಅವರ ಜುಬ್ಬಾ–ಪಂಚೆ ಬಿಚ್ಚಿಕೊಂಡು ಹೋಗಬೇಕಷ್ಟೆ’ ಎಂದರು.
ಸಿದ್ದರಾಮಯ್ಯ ಮಾತನಾಡುತ್ತಾ, ‘ಏಕೆ ಸುಳ್ಳು ಹೇಳುತ್ತೀರಿ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡುವಂತಿಲ್ಲ. ಕೇಳಿದರೆ ಸಿದ್ದರಾಮಯ್ಯ ಅವರನ್ನು ನೋಡ್ಕೋತಿವಿ ಅಂತಾರೆ, ಮಾತೆತ್ತಿದರೆ ಐ.ಟಿ ದಾಳಿ ಅಂತಾರೆ’ ಎಂದು ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.