ADVERTISEMENT

ಜೆಡಿಎಸ್‌ನೊಂದಿಗೆ ಮೈತ್ರಿ ಇಲ್ಲ: ಬಿ.ಎಸ್.ಯಡಿಯೂರಪ್ಪ ಸ್ಪಷನೆ

ಮೈಸೂರು–ಚಾಮರಾಜನಗರ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:52 IST
Last Updated 6 ಡಿಸೆಂಬರ್ 2021, 5:52 IST
ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಭಾನುವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಸಿದ್ದರಾಜು, ಹರ್ಷವರ್ಧನ್, ಎನ್.ಮಹೇಶ್, ರಾಜೇಂದ್ರ, ಮಂಗಳಾ ಸೋಮಶೇಖರ್, ಶ್ರೀವತ್ಸ, ಎಸ್.ಟಿ.ಸೋಮಶೇಖರ್, ಬಿ.ಎಸ್.ಯಡಿಯೂರಪ್ಪ, ರಘು ಆರ್. ಕೌಟಿಲ್ಯ,  ಪ್ರತಾಪಸಿಂಹ, ಎಲ್.ನಾಗೇಂದ್ರ, ಸುನಂದಾ ಫಾಲನೇತ್ರ ಗೆಲುವಿನ ಚಿಹ್ನೆ ತೋರಿಸಿದರು
ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಭಾನುವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಸಿದ್ದರಾಜು, ಹರ್ಷವರ್ಧನ್, ಎನ್.ಮಹೇಶ್, ರಾಜೇಂದ್ರ, ಮಂಗಳಾ ಸೋಮಶೇಖರ್, ಶ್ರೀವತ್ಸ, ಎಸ್.ಟಿ.ಸೋಮಶೇಖರ್, ಬಿ.ಎಸ್.ಯಡಿಯೂರಪ್ಪ, ರಘು ಆರ್. ಕೌಟಿಲ್ಯ,  ಪ್ರತಾಪಸಿಂಹ, ಎಲ್.ನಾಗೇಂದ್ರ, ಸುನಂದಾ ಫಾಲನೇತ್ರ ಗೆಲುವಿನ ಚಿಹ್ನೆ ತೋರಿಸಿದರು   

ಮೈಸೂರು: ‘ವಿಧಾನಪರಿಷತ್ತಿನ ಮೈಸೂರು– ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಜೆಡಿಎಸ್ ಸೇರಿದಂತೆ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಇಲ್ಲಿನ ರಾಜೇಂದ್ರ ಕಲಾಮಂದಿರ ದಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಎಲ್ಲಿ ಜೆಡಿಎಸ್ ಸ್ಪರ್ಧಿಸಿಲ್ಲವೋ ಅಲ್ಲಿ ಮಾತ್ರ ಬೆಂಬಲ ಕೊಡಿ ಎಂದು ಕೇಳಿದ್ದೇವೆ. ಇದರಿಂದ ಮತದಾರರು ಗೊಂದಲಕ್ಕೆ ಒಳಗಾಗಬಾರದು. ಪ್ರಸ್ತುತ ಕ್ಷೇತ್ರದಲ್ಲಿ ಯಾರೊಂದಿಗೂ ಒಳ ಒಪ್ಪಂದವಾಗಲಿ, ಹೊರ ಒಪ್ಪಂದವಾಗಲಿ ಮಾಡಿಕೊಂಡಿಲ್ಲ’ ಎಂದು ಹೇಳಿದರು.

ADVERTISEMENT

ಎಲ್ಲ ಗ್ರಾ.ಪಂ.ಗಳಲ್ಲಿ ಪ್ರಚಾರ ನಡೆಸಿರುವ ರಘು ಕೌಟಿಲ್ಯ ಈಗಾಗಲೇ ಗೆದ್ದಾಗಿದೆ. ಆದರೆ, ಮತದಾರರು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ರಘು ಅವರು ಕೋವಿಡ್ ಸಮಯದಲ್ಲಿ ಸೇವಾ ಕಾರ್ಯಗಳಲ್ಲಿ ಹೆಚ್ಚು ಸಮಯ ತೊಡಗಿಸಿಕೊಂಡ ಕಾರಣ, ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳಲಾಗದೇ ಕಳೆದುಕೊಳ್ಳ ಬೇಕಾಯಿತು ಎಂದು ಸ್ಮರಿಸಿದರು.

ಪ್ರತಿ ಚುನಾವಣೆಯಲ್ಲಿಯೂ 600ರಿಂದ 700 ಮತಗಳು ತಿರಸ್ಕೃತ ವಾಗುತ್ತಿವೆ. ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದು ಕಿವಿಮಾತು ಹೇಳಿದರು.

‘ಬಿಜೆಪಿ 15– 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ‘ಮುಂದಿನ 15 ದಿನಗಳಲ್ಲಿ ಪ್ರತಿ ಕ್ಷೇತ್ರದಲ್ಲೂ ಪ್ರವಾಸ ಕಾರ್ಯ ನಡೆಸುತ್ತೇನೆ’ ಎಂದು ಪುನರುಚ್ಚರಿಸಿದರು.

‘ನಾನು ಕಣ್ಣೀರು ಹಾಕಿದ್ದು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಕ್ಕೆ ಅಲ್ಲ. ಪುರಸಭೆ ಸದಸ್ಯನಾಗಿದ್ದ ನನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೇರಿಸಿದ ಜನರ ಬೆಂಬಲ ನೆನೆದು ನನ್ನ ಕಣ್ಣಿನಲ್ಲಿ ನೀರು ಬಂತು’ ಎಂದು ಹೇಳಿದರು.

ಶಾಸಕ ಎನ್.ಮಹೇಶ್ ಮಾತನಾಡಿ, ‘ಕಾಂಗ್ರೆಸ್‌ನವರು ಸುಮ್ಮನೆ ಬಾಯಿ ಚಪಲಕ್ಕೆ ಮಾತನಾಡಬಾರದು’ ಎಂದರು.

ಸಂಸದ ಪ್ರತಾಪಸಿಂಹ ಮಾತನಾಡಿ, ಜನಜೀವನ ಮಿಷನ್ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಜಾರಿಗೆ ತಂದ ವಿವಿಧ ಯೋಜನೆಗಳನ್ನು ವಿವರಿಸಿದರು.

ಪಕ್ಷದ ಅಭ್ಯರ್ಥಿ ರಘು ಆರ್. ಕೌಟಿಲ್ಯ ಮಾತನಾಡಿ, ‘ಗ್ರಾಮ ಪಂಚಾಯಿತಿ ಸದಸ್ಯರಿಗೆ ₹10 ಸಾವಿರ ಗೌರವಧನ, ಉಚಿತ ಬಸ್ ಪಾಸ್ ನೀಡಲು ಶ್ರಮಿಸುತ್ತೇನೆ. ಪ್ರತಿ ಗ್ರಾಮ ಪಂಚಾಯಿತಿಯ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತೇನೆ’ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮೇಯರ್ ಸುನಂದಾ ಫಾಲನೇತ್ರ, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಮುಖಂಡರಾದ ವಿಜಯಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.