ಮೈಸೂರು: ‘ಈಶ್ವರಪ್ಪಗೆ ಸಂಸ್ಕೃತಿ. ಸಂಸ್ಕಾರ ಇಲ್ಲ. ಆದ್ದರಿಂದಲೇ ಮಾತನಾಡುವಾಗ ಹೊಲಸು ಪದಗಳನ್ನು ಬಳಸುವರು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
‘ಮೊದಲಿನಿಂದಲೂ ಅದೇ ರೀತಿಯ ಭಾಷೆ ಬಳಸುತ್ತಾ ಬಂದಿದ್ದಾರೆ. ಅವರು ಬಂದಿರುವ ದಾರಿಯೇ ಅಂತಹದ್ದು. ಒಳ್ಳೆಯ ಮಾತುಗಳನ್ನು ನಿರೀಕ್ಷಿಸುವಂತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಸ್ಪರ ಟೀಕೆ, ಹೊಗಳಿಕೆ, ತೆಗಳಿಕೆ ಸಾಮಾನ್ಯ. ಅಧಿಕಾರದಲ್ಲಿ ಇರುವವರು ಅದನ್ನೆಲ್ಲಾ ಸಹಿಸಿಕೊಳ್ಳಬೇಕಾಗುತ್ತದೆ’ ಎಂದು ಮಂಗಳವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.
‘ಕೆಟ್ಟ ಪದಗಳನ್ನು ಯಾರು ಬೇಕಾದರೂ ಬಳಸಬಹುದು. ಆದರೆ ಸಭ್ಯ ವ್ಯಕ್ತಿಗಳು ಬಳಸಲ್ಲ. ಸಂಸ್ಕೃತಿ ಇಲ್ಲದವರು ಮಾತ್ರ ಬಳಸುವರು. ಮಂತ್ರಿಯಾಗಿದ್ದೇನೆ ಎಂಬ ಜವಾಬ್ದಾರಿಯೂ ಇಲ್ಲದೆ, ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ’ ಎಂದು ಟೀಕಿಸಿದರು.
ಅವನ ಸರ್ಟಿಫಿಕೇಟ್ ಬೇಕಾ?: ‘ಸಿದ್ದರಾಮಯ್ಯ ಕಾಂಗ್ರೆಸ್ನ ಇಲಿ’ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಾನು ಇಲಿಯೋ, ಹುಲಿನೋ ಅಥವಾ ಮನುಷ್ಯನೋ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಅವನ್ಯಾವನ್ರೀ ಹೇಳೋಕೆ. ಅವನ ಸರ್ಟಿಫಿಕೇಟ್ ಬೇಕಾ’ ಎಂದು ತಿರುಗೇಟು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.