ತೆಂಗಿನ ಮರ ಏರುವ ಕಾಯಕ
(ಸಾಂದರ್ಭಿಕ ಚಿತ್ರ)
ಮೈಸೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಕೇರಾ’ ಸುರಕ್ಷಾ ವಿಮಾ ಯೋಜನೆಯು ತೆಂಗಿನ ಮರಗಳನ್ನು ಏರುವ ಕೆಲಸ ನಂಬಿರುವವರಿಗೆ ವರದಾನವಾಗಿದೆ.
ತೆಂಗು ಅಭಿವೃದ್ಧಿ ಮಂಡಳಿ (ಸಿಡಿಬಿ), ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯಿಂದ ದಿ ನ್ಯೂ ಇಂಡಿಯಾ ಅಶ್ಶೂರೆನ್ಸ್ ಕಂಪನಿ ಮೂಲಕ ಈ ವಿಮಾ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಆದರೆ, ಪ್ರಚಾರದ ಕೊರತೆಯಿಂದ ಬಹಳಷ್ಟು ಮಂದಿಗೆ ಇದರ ಬಗ್ಗೆ ಮಾಹಿತಿ ತಿಳಿದಿಲ್ಲ.
ತೆಂಗಿನ ಮರವನ್ನೇರಿ ಎಳನೀರು, ಕಾಯಿ ಕೀಳುವವರಿಗೆ, ನೀರಾ ತಂತ್ರಜ್ಞರಿಗೆ, ತೆಂಗಿನ ಕಾಯಿ ಕೊಯ್ಲು ಮಾಡುವವರಿಗೆ, ಹೈಬ್ರಿಡೈನೇಶನ್ (ಸಂಕರೀಕರಣ) ಕೆಲಸಗಾರರಿಗೆ, ಡಿಎಸ್ಪಿ (ಪ್ರಾತ್ಯಕ್ಷಿಕೆ ಹಾಗೂ ಬೀಜ ಉತ್ಪಾದನೆ) ಫಾರ್ಮ್ಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಾಗೂ ಎಫ್ಸಿಟಿ (ಫ್ರೆಂಡ್ಸ್ ಆಫ್ ಕೋಕೊನಟ್ ಟ್ರೀ) ಕೌಶಲ–ತರಬೇತಿ ಕಾರ್ಯಕ್ರಮದಲ್ಲಿ ತೊಡಗಿರುವ ಕಾರ್ಮಿಕರಿಗೆ ಸಮಗ್ರ ವಿಮಾ ರಕ್ಷಣೆ ದೊರೆಯಲಿದೆ.
ವೈಯಕ್ತಿಕ ಅಪಘಾತ ವಿಮೆ:
ವಿಮೆಯ ವಾರ್ಷಿಕ ಕಂತು (ಜಿಎಸ್ಟಿ ಸೇರಿ) ₹956 ಆಗಿದೆ. ಇದರಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ಕಂತಿನ ಪಾಲು ₹717 ಆಗಿದ್ದು, ಉಳಿದ ₹239 ಕಂತಿನ ಮೊತ್ತವನ್ನು ಫಲಾನುಭವಿಗಳು ಪಾವತಿಸಬೇಕಿದೆ.
ಇದು ವೈಯಕ್ತಿಕ ಅಪಘಾತ ವಿಮಾ ಯೋಜನೆಯಾಗಿದೆ. ಮರದಿಂದ ಕಾಯಿ ಕೀಳುವಾಗ ಬಿದ್ದು ಮೃತಪಟ್ಟರೆ ಅಥವಾ ಅಂಗವೈಕಲ್ಯಕ್ಕೆ ತುತ್ತಾದರೆ ಕೇರಾ ವಿಮೆ ನೆರವಾಗಲಿದೆ. ಗರಿಷ್ಠ ₹7 ಲಕ್ಷದವರೆಗೆ ಪರಿಹಾರ ಸಿಗಲಿದೆ.
‘ಈ ಯೋಜನೆಯು ತೆಂಗಿನಕಾಯಿ ಕೊಯ್ಲು ಮಾಡುವವರಿಗೆ ಅನುಕೂಲವಾಗಿದ್ದು, ಪ್ರಯೋಜನ
ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸ ಲಾಗುತ್ತಿದೆ. ಕಂತಿನ ಮೊತ್ತ ಕಡಿಮೆ ಪ್ರಮಾಣದಲ್ಲಿದ್ದು, ಕಟ್ಟಿದವರು ಸಮಗ್ರ ವಿಮಾ ರಕ್ಷಣೆಯ ಸೌಲಭ್ಯ ಪಡೆಯ ಬಹುದು’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ ಅಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ತೋಟಗಾರಿಕೆ ಇಲಾಖೆ ಮೂಲಕ ಮಾರ್ಚ್ ಅಂತ್ಯದವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ಇಲಾಖೆಯ ಕಚೇರಿಗಳಲ್ಲಿ ಹೆಚ್ಚಿನ ವಿವರ ಪಡೆದುಕೊಳ್ಳಬಹುದು’ ಎನ್ನುತ್ತಾರೆ ಅವರು.
ವಿಮೆಯಡಿ ಪರಿಹಾರ ಎಷ್ಟು?
₹7 ಲಕ್ಷ; ಸಾವು/ ಶಾಶ್ವತ ಅಂಗವೈಕಲ್ಯ
₹3.50 ಲಕ್ಷ;ಭಾಗಶಃ ಅಂಗವೈಕಲ್ಯ
₹2 ಲಕ್ಷ; ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ 2 ತಿಂಗಳವರೆಗೆ ಔಷಧ ಒಳಗೊಂಡಂತೆ ಆಸ್ಪತ್ರೆಯ ವೆಚ್ಚದ ಮರುಪಾವತಿ
₹3,500; ಅಪಘಾತ, ಸಾವಿನ ಸಂದರ್ಭದಲ್ಲಿ ಆಂಬುಲೆನ್ಸ್ ಶುಲ್ಕ
₹21 ಸಾವಿರ; ತಾತ್ಕಾಲಿಕ ಅಂಗವೈಕಲ್ಯದ ಸಂದರ್ಭದಲ್ಲಿ ಗರಿಷ್ಠ ಆರು ವಾರದವರೆಗೆ ಪರಿಹಾರ
₹3 ಸಾವಿರ; ಆಸ್ಪತ್ರೆಯಲ್ಲಿ ಜೊತೆಯಲ್ಲಿದ್ದು ನೋಡಿಕೊಳ್ಳುವವರಿಗೆ ನೈಜ ಬಿಲ್ಗಳ ಆಧಾರದ ಮೇಲಿನ ವೆಚ್ಚ
₹5,500; ಅಂತ್ಯಕ್ರಿಯೆಗೆ ನೀಡುವ ವೆಚ್ಚ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.