ADVERTISEMENT

ಕೋಸಂಬರಿ –ಪಾನಕ; ಆರೋಗ್ಯಕ್ಕೆ ಪೂರಕ

ಡಾ.ಪುನೀತ್ ಕುಮಾರ್ ಪದ್ಮನಾಭನ್
Published 12 ಏಪ್ರಿಲ್ 2019, 20:00 IST
Last Updated 12 ಏಪ್ರಿಲ್ 2019, 20:00 IST

ಶ್ರೀರಾಮನವಮಿ ಎಂದರೆ ನಮ್ಮ ಮನಸ್ಸಿಗೆ ಬರುವುದು ಶ್ರೀರಾಮನ ಭಜನೆ ಹಾಗೂ ದೇವಸ್ಥಾನ, ರಸ್ತೆಬದಿ, ಮನೆ, ಕಚೇರಿಗಳಲ್ಲಿ ವಿತರಿಸಲಾಗುವ ಪ್ರಸಾದ ರೂಪವಾದ ಕೋಸಂಬರಿ, ಪಾನಕ (ಬೇಲದ ಹಣ್ಣು, ನಿಂಬೆಹಣ್ಣು, ಕರ್ಬೂಜ), ಮಜ್ಜಿಗೆ, ಹುಳಿ ಮಾವಿನ ಗೊಜ್ಜು ಇತ್ಯಾದಿ.

ಸನಾತನ ಭಾರತೀಯ ಮಹಾಪರ್ವಗಳೆಲ್ಲವೂ ವಿಜ್ಞಾನಮಯವಾಗಿದ್ದು, ಇವುಗಳ ಆಹಾರ ವಿಹಾರ ಆಚಾರಗಳನ್ನು ಋತುಕಾಲದ ಅನುಸಾರವಾಗಿ ಹೆಣೆಯಲಾಗಿದೆ. ಆಯುರ್ವೇದಶಾಸ್ತ್ರದ ಶರೀರ ವಿಜ್ಞಾನದ ಸಹಾಯದಿಂದ ಈ ಎಲ್ಲಾ ವಿಚಾರಗಳನ್ನು ಅರ್ಥೈಸಿಕ್ಕೊಳ್ಳಬಹುದು.

ರಾಮನವಮಿಯ ಆಚರಣೆಗಳಲ್ಲಿ ರಾಮಾಯಣ ಕಥಾಶ್ರವಣ, ರಾಮಭಜನೆ, ಆರಾಧನೆ, ಉಪವಾಸ, ರಾತ್ರಿಜಾಗರಣೆ, ಪಿತೃತರ್ಪಣಗಳು ಸೇರಿಕೊಂಡಿವೆ. ಪ್ರತೀ ಸಂವತ್ಸರದ ಶ್ರೀರಾಮನವಮಿಯ ಕಾಲಘಟ್ಟದ ಬಿಸಿಲು ನಮ್ಮನ್ನು ಬೆರಗುಗೊಳಿಸುವ ಕಾಲ. ಸಹಜವಾಗಿಯೇ ಸುಸ್ತು, ನೀರಡಿಕೆ, ಬಲಹೀನತೆ, ಆಯಾಸ, ತಲೆನೋವು, ತಲೆಸುತ್ತು, ಮೂತ್ರದ ಸೋಂಕು, ಲೋಳೆಯುಕ್ತ ವಾಂತಿ ಭೇದಿ ನಮ್ಮನ್ನು ಬಾಧಿಸುವವು.

ADVERTISEMENT

ಬೇಸಿಗೆಯ ಕಾಲದಲ್ಲಿ ಸಹಜವಾಗಿ ದೇಹದ ಜೀರ್ಣಶಕ್ತಿ ಕುಂದಿದ್ದು, ದೇಹಕ್ಕೆ ಬಲವನ್ನು ನೀಡಲು ಸುಲಭವಾಗಿ ಜೀರ್ಣವಾಗುವ ಹೆಸರುಬೇಳೆಯ ಕೋಸಂಬರಿಯನ್ನು ಉಪಯೋಗಿಸಿದ್ದಲ್ಲಿ ದೇಹವು ತಂಪಾಗಿ ಉದರಕ್ಕೆ ಹಿತವಾಗುವುದು. ಮಜ್ಜಿಗೆ ಹಾಗೂ ಬೇಲದ ಪಾನಕ ಸೇವನೆಯು ನೀರಡಿಕೆಯನ್ನು ನೀಗಿಸಿ ದೇಹದ ಜೀರ್ಣಶಕ್ತಿಯನ್ನು ಉತ್ತೇಜಿಸಿ, ದೈಹಿಕ ಆಯಾಸವನ್ನು ನಿವಾರಿಸಿ, ಸಣ್ಣ ಹಾಗೂ ದೊಡ್ಡ ಕರುಳುಗಳಿಗೆ ಹೊಸ ಚೈತನ್ಯವನ್ನು ತರುವುದು. ಶುಂಠಿ ಬೆಲ್ಲವನ್ನು ಸೇರಿಸಿ ತಯಾರಿಸಿದ ನಿಂಬೆಹಣ್ಣಿನ ಪಾನಕವು ಪಿತ್ತವಾತವನ್ನು ನಿವಾರಿಸಿ ಕಫವನ್ನು ಒಡೆದು, ತಂಪುಮಾಡಿ, ಜೀರ್ಣಾಗ್ನಿಯನ್ನು ಉದ್ದೀಪನಗೊಳಿಸುವುದು.

ಕಡಲೆಕಾಳು ಕೋಸಂಬರಿ ಕೂಡ ಕಫಪಿತ್ತಗಳನ್ನು ನಿವಾರಿಸಿ, ರಕ್ತಶುದ್ಧೀಕರಿಸಿ, ಉಪವಾಸದಿಂದ ಉದ್ರೇಕಗೊಳ್ಳುವ ಪಿತ್ತವನ್ನು ಶಾಂತಗೊಳಿಸುವುದು ಹಾಗೂ ಜ್ವರನಾಶಕವಾಗಿ ಕೆಲಸಮಾಡುವುದು. ಕಡಲೆಕಾಳಿನ ಒಗಚು ರುಚಿರಸವು ಉದ್ರಿಕ್ತವಾಗಿರುವ ಕಫವನ್ನು ನಿವಾರಿಸಿವುದು.

ತೆಂಗಿನ ಎಳೆನೀರು ಪಾನ ಮೂತ್ರ ಸೋಂಕು, ತಲೆಸುತ್ತುವಿಕೆ, ನೀರಡಿಕೆ, ಸುಸ್ತುಗಳನ್ನು ನಿವಾರಿಸುವುದು. ಶುಂಠಿ, ಮೆಣಸು, ಜೀರಿಗೆ, ಹಿಂಗು, ಬೆಲ್ಲಗಳನ್ನು ಸೇರಿಸಿ ತಯಾರಿಸಿದ ಮಾವಿನಕಾಯಿಯ ಗೊಜ್ಜು ಜೀರ್ಣಕಾರಿ ಹಾಗೂ ಕಫ ನಿವಾರಕ. ವಸಂತ ಹಾಗೂ ಗ್ರೀಷ್ಮಋತುಗಳಲ್ಲಿ ಸಹಜವಾಗಿಯೇ ಹಸಿವು ಕ್ಷೀಣವಿದ್ದು, ದೇಹಕ್ಕೆ ಬೇಕಾಗುವ ಶಕ್ತಿಯ ಪೂರೈಕೆ ಲಘು ಆಹಾರಗಳಾದ ಪಾನಕ ಕೋಸಂಬರಿಗಳಿಂದ ಆಗುವುದಲ್ಲದೆ, ತ್ರಿದೋಷ ಸಾಮ್ಯತೆಯನ್ನು ತರುವುದರಲ್ಲಿ ರಾಮನವಮಿಯ ಆಹಾರ ಸಂಪ್ರದಾಯ ಪದ್ಧತಿಗಳ ಆಚರಣೆ ಮುಖ್ಯವಾಗುವುದು. ರಾತ್ರಿ ಜಾಗರಣೆ ಕೂಡ ವಸಂತಋತುವಿನ ಕಫದೋಷ ನಿವಾರಿಸುವುದು.

ಇವೆಲ್ಲವೂ ದೇಹದ ಆರೋಗ್ಯದ ವಿಷಯವಾದರೆ, ರಾಮಕಥಾಶ್ರವಣ, ನೃತ್ಯ, ಗೀತವಾದ್ಯಗಳೆಲ್ಲವೂ ಕೂಡ ಭಗವಂತನಲ್ಲಿ ತನ್ಮಯತೆಯನ್ನು ತಂದುಕೊಟ್ಟು, ಮನಸ್ಸನ್ನು ನಿರ್ಮಲಗೊಳಿಸಿ, ಮನಃಶಾಂತಿ ತಂದು, ನಮ್ಮ ಬುದ್ದೀಂದ್ರಿಯಗಳನ್ನು ಪ್ರಸನ್ನವಾಗಿ ಇಡಲು ಸಹಾಯಕವಾಗುವುದು. ಈ ಬಗೆಯ ಆಹಾರ ಮತ್ತು ಭಗವಂತನ ಸ್ಮರಣೆಗೆ ನಿಸರ್ಗವೇ ಏರ್ಪಡಿಸಿರುವ ಕಾಲಧರ್ಮ ಎರಡರ ಯೋಗವಾಗಿದೆ.

ಹೀಗೆ ಶ್ರೀರಾಮನವಮಿಯು ಮಾನವನ ಆಧಿವ್ಯಾಧಿಗಳನ್ನು ನಿವಾರಿಸುವ ಮಹಾಪರ್ವ.ಈ ಆಹಾರ ಪದ್ಧತಿಗಳು ಹಾಗೂ ಆಚರಣೆಗಳು ದೇಹೇಂದ್ರಿಯಗಳಿಗೆ ಮುದವನ್ನು ನೀಡಿ ಆರೋಗ್ಯದಲ್ಲಿ ಸಮತೋಲನ ತರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.