ADVERTISEMENT

ಬಹಿರಂಗ ಚರ್ಚೆಗೆ ಬನ್ನಿ: ಪ್ರತಾಪ ಸಿಂಹಗೆ ಕೆಪಿಸಿಸಿ ವಕ್ತಾರ ಲಕ್ಷ್ಮಣ ಸವಾಲು

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 12:23 IST
Last Updated 11 ಜೂನ್ 2022, 12:23 IST
   

ಮೈಸೂರು: ‘ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೈಸೂರಿಗೆ ನೀಡಿರುವ ಕೊಡುಗೆ ಏನು ಎಂದು ಬಿಜೆಪಿ ಸಂಸದ ಪ್ರತಾಪ ಸಿಂಹ ಕೇಳಿದ್ದಾರೆ. ಈ ವಿಷಯದಲ್ಲಿ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧವಿದ್ದು, ಜೂನ್‌ 24ರ ಒಳಗೆ ದಿನಾಂಕ–ಸ್ಥಳ ನಿಗದಿಪಡಿಸಲಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಸವಾಲು ಹಾಕಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಜೂನ್‌ 24ರ ಒಳಗೆ ಸಂಸದರು ಉತ್ತರ ನೀಡದಿದ್ದಲ್ಲಿ ಅವರ ಕಚೇರಿಗೆ ನಾನೇ ಖುದ್ದಾಗಿ ಹೋಗುತ್ತೇನೆ. ಮಾಧ್ಯಮದವರ ಎದುರು ಅಲ್ಲಿಯೇ ಚರ್ಚೆಯಾಗಲಿ’ ಎಂದರು.

‘ಕೇವಲ ಸುಳ್ಳುಗಳನ್ನು ಹೇಳಿಕೊಂಡು ಬಹಳ ವರ್ಷ ರಾಜಕಾರಣ ಮಾಡಲಾಗುವುದಿಲ್ಲ. ಮೈಸೂರಿಗೆ ಯಾರ ಕಾಲದಲ್ಲಿ ಏನೇನು ದೊರೆತಿದೆ ಎನ್ನುವುದಕ್ಕೆ ದಾಖಲೆಗಳಿವೆ’ ಎಂದು ತಿರುಗೇಟು ನೀಡಿದರು.

ADVERTISEMENT

‘ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ 2ನೇ ಅಭ್ಯರ್ಥಿ ಸೋಲಿಗೆ ಜೆಡಿಎಸ್ ನೇರ ಕಾರಣ. ಆ ಪಕ್ಷವು ಬಿಜೆಪಿ ‘ಬಿ’ ಟೀಂ ಆಗಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ ಅವರು ₹ 350 ಕೋಟಿ ಸಾಲ ನೀಡಿರುವುದಾಗಿ ಪ್ರಮಾಣಪತ್ರದಲ್ಲಿ ತೋರಿಸಿದ್ದಾರೆ. ಎಚ್‌.ಡಿ. ದೇವೇಗೌಡರ ಕುಟುಂಬದವರಿಗೂ ಸಾಲ ಕೊಟ್ಟಿದ್ದಾಗಿ ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ₹ 19.08 ಕೋಟಿ ಸಾಲವನ್ನು ಯಾಕೆ ಕೊಟ್ಟಿದ್ದಾರೆ?’ ಎಂದು ಕೇಳಿದರು.

‘ಜೆಡಿಎಸ್‌ನವರು ಜಾತ್ಯತೀತ ಎಂಬ ಪದವನ್ನು ಕಿತ್ತು ಬಿಸಾಡಲಿ. ಅದನ್ನು ‌ಬಳಸುವ ನೈತಿಕತೆ ಅವರಿಗಿಲ್ಲ. ಎಚ್‌.ಡಿ. ದೇವೇಗೌಡ ಅವರನ್ನು ರಾಜ್ಯಸಭೆ ಸದಸ್ಯರನ್ನು ಮಾಡಿದವರು ಬಿಜೆಪಿಯವರಾ? ಆ ಪಕ್ಷದವರಿಗೆ ನೈತಿಕತೆ ಅಥವಾ ಕೃತಜ್ಞತೆ ಇದ್ದಿದ್ದರೆ ಅಲ್ಪಸಂಖ್ಯಾತ ಅಭ್ಯರ್ಥಿ ಗೆಲ್ಲಿಸಲು ಸಹಕರಿಸಬೇಕಿತ್ತು’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.