
ಮೈಸೂರು: ‘ಸ್ತ್ರೀವಾದಿ ಹಾಗೂ ಭಾಷಿಕ ನೆಲೆಯಲ್ಲಿ ಕುಮಾರವ್ಯಾಸನ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ’ ಎಂದು ಬೆಂಗಳೂರು ಸುರಾನ ಸಂಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಿ.ಗೀತಾ ಅಭಿಪ್ರಾಯಪಟ್ಟರು.
ಕರ್ನಾಟಕ ಗಮಕ ಕಲಾ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕಗಳು ಇಲ್ಲಿನ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕುಮಾರವ್ಯಾಸ ಜಯಂತಿ, ಕಾವ್ಯಾಧಾರಿತ ಕೃತಿಗಳ ಪ್ರದರ್ಶನ ಹಾಗೂ ಗಮಕ ವಾಚನ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
‘ಕುಮಾರವ್ಯಾಸನ ಕಾವ್ಯವು ಘನತೆ ಹೊಂದಿದೆ. ಆತನ ಭಾರತಕಥಾಮಂಜರಿ ನೇರವಾಗಿ ಜನರನ್ನು ತಲುಪುತ್ತದೆ. ಅಂಥ ಅದ್ಭುತ ಕವಿಯ ಬಗ್ಗೆ ಅಧ್ಯಯನ ಆಗಿರುವುದು ಕಡಿಮೆ’ ಎಂದು ಬೇಸರ ವ್ಯಕ್ತಪಡಿಸಿದರು.
ಉದ್ಘಾಟಿಸಿದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ‘ಕನ್ನಡ ಇರುವವರೆಗೆ ಕುಮಾರವ್ಯಾಸರನ್ನು ಮರೆಯಲಾಗದು. ರನ್ನ, ಪೊನ್ನ, ಜನ್ನ, ರಾಘವಾಂಕರ ಸಾಲಿನಲ್ಲಿ ನಿಲ್ಲುವ ಮೇರು ಕವಿ’ ಎಂದರು.
ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಕ್ಯಾತಮಾರನಹಳ್ಳಿ ಎಂ.ಮಹೇಶ್ ಮಾತನಾಡಿ, ‘ಗಮಕ ಕಲೆಯ ಬಗ್ಗೆ ಅನೇಕ ಕನ್ನಡ ಶಿಕ್ಷಕರಿಗೆ ಸರಿಯಾಗಿ ಗೊತ್ತಿಲ್ಲ. ಭಾವ ಹಾಗೂ ಸಾಹಿತ್ಯ ಪ್ರಧಾನವಾದ ಗಮಕ ಕಲೆಯ ಬಗ್ಗೆ ಅರಿವು ಮೂಡಿಸಲು ಪರಿಷತ್ತುಗಳ ಜೊತೆ ಸೇರಿ ಕಾರ್ಯಾಗಾರ ಏರ್ಪಡಿಸಲಾಗುವುದು’ ಎಂದು ತಿಳಿಸಿದರು.
ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೃ.ಪಾ.ಮಂಜುನಾಥ್, ‘ಕುಮಾರವ್ಯಾಸ ಗಮಕಿಗಳ ಆರಾಧ್ಯದೈವ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿದರು. ರಾಮಶೇಷನ್ ಗಮಕವಾಚನ ಮಾಡಿದರು.
ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ಮ.ನ.ಲತಾ ಮೋಹನ್, ಪ್ರಮುಖರಾದ ಎಂ.ಚಂದ್ರಶೇಖರ್, ಜಿ.ಪ್ರಕಾಶ್, ಜಯಪ್ಪ ಹೊನ್ನಾಳಿ, ನಿ.ಗೂ.ರಮೇಶ್, ರಾಘವೇಂದ್ರ, ವನಮಾಲ, ಚಂದ್ರಶೇಖರ್, ಪರಮೇಶ್ ಕೆ. ಉತ್ತನಹಳ್ಳಿ, ಸಿ.ಎಸ್.ರಾಘವೇಂದ್ರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.