ಮೈಸೂರು: ‘ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಎಸ್ಯುವಿ ವಾಹನ ಚಲಾಯಿಸಿದ, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರನನ್ನು ಬಂಧಿಸಿ, ಜೈಲಿಗಟ್ಟಿ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸೋಮವಾರ ಇಲ್ಲಿ ಆಗ್ರಹಿಸಿದರು.
‘ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಸುಪ್ರೀಂಕೋರ್ಟ್ನ ಹಾಲಿ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು. ತಿಂಗಳೊಳಗೆ ವರದಿ ಸಲ್ಲಿಕೆಯಾಗಲಿ’ ಎಂದು ಅವರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಪ್ರಧಾನಿ ಕುರ್ಚಿಗೆ ರೈತರ ಚಳವಳಿ ಕಂಟಕವಾಗಿದೆ. ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ ಬಗ್ಗೆ ಮೋದಿ ಒಂದು ಮಾತನಾಡಿಲ್ಲ. ದ್ವೇಷದ ಮನಸ್ಥಿತಿ ಹೊಂದಿದ್ದಾರೆ. ತಕ್ಷಣವೇ ಅವರು ದೇಶದ ರೈತರ ಕ್ಷಮೆ ಕೋರಬೇಕು’ ಎಂದು ನಾಗೇಂದ್ರ ಆಗ್ರಹಿಸಿದರು.
‘ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸದಿದ್ದರೆ; ರಾಜ್ಯದಲ್ಲಿನ ಎಲ್ಲ ಸಂಸದರ ಕಚೇರಿ ಮುಂಭಾಗ ಪಿಕೆಟಿಂಗ್ ನಡೆಸಲಾಗುವುದು’ ಎಂದು ಬಡಗಲಪುರ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.