ADVERTISEMENT

ತಿ.ನರಸೀಪುರ: ಭೂಮಿ ಹಕ್ಕುಪತ್ರ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:21 IST
Last Updated 21 ಫೆಬ್ರುವರಿ 2026, 5:21 IST
ತಿ.ನರಸೀಪುರ ಪಟ್ಟಣದ ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ರೀಡಾಂಗಣಕ್ಕೆ ನಿಗದಿಯಾದ ಭೂಮಿಯ ಹಕ್ಕುಪತ್ರವನ್ನು ತಹಶೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಅವರು ಯುವ ಸಬಲೀಕರಣ ಮತ್ತು‌ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು
ತಿ.ನರಸೀಪುರ ಪಟ್ಟಣದ ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ರೀಡಾಂಗಣಕ್ಕೆ ನಿಗದಿಯಾದ ಭೂಮಿಯ ಹಕ್ಕುಪತ್ರವನ್ನು ತಹಶೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಅವರು ಯುವ ಸಬಲೀಕರಣ ಮತ್ತು‌ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು   

ತಿ.ನರಸೀಪುರ: ಕ್ರೀಡಾಂಗಣ ನಿರ್ಮಾಣಕ್ಕೆ ನಿಗದಿಯಾಗಿರುವ 5 ಎಕರೆ ಪ್ರದೇಶದ ‌ಹಕ್ಕುಪತ್ರವನ್ನು ತಹಶೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಅವರಿಗೆ ಹಸ್ತಾಂತರಿಸಿದರು.

ಪಟ್ಟಣದ ಕೆಎಸ್‌ಐಸಿ ಫಿಲೇಚರ್‌ ಕಾರ್ಖಾನೆ ಆವರಣದಲ್ಲಿ ನಿಗದಿಪಡಿಸಿರುವ ಭೂ ಪ್ರದೇಶವನ್ನು ಭೂಮಾಪಕರಿಂದ ಶುಕ್ರವಾರ ಗುರುತು ಹಾಕಿಸಿ (ಹದ್ದುಬಸ್ತು) ಕಲ್ಲು ಹಾಕಲಾಯಿತು.

ಹಕ್ಕುಪತ್ರ ಹಸ್ತಾಂತರ ಮಾಡಿ ಮಾತನಾಡಿದ ಸುರೇಶ್ ಆಚಾರ್, ‘ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಸಿಲ್ಕ್ ಫಿಲೇಚರ್ ಕಾರ್ಖಾನೆಯ ಆವರಣದಲ್ಲಿ ಕ್ರೀಡಾ ಇಲಾಖೆಗೆ ಸರ್ಕಾರದಿಂದ ಹಸ್ತಾಂತರವಾಗಿದ್ದ ಜಮೀನನ್ನು ಆರ್‌ಟಿಸಿಯಲ್ಲಿ ನಮೂದಿಸಿ, ಹದ್ದುಬಸ್ತು ಮಾಡಿ ಆ ಕಾಮಗಾರಿ ಆರಂಭಕ್ಕೆ ಕ್ರಮವಹಿಸಲಾಗಿದೆ, ಕ್ರೀಡಾಂಗಣಕ್ಕಾಗಿ ರೇಷ್ಮೆ ಇಲಾಖೆಯಿಂದ 5 ಎಕರೆ ಭೂಮಿಯನ್ನು ಸರ್ಕಾರ ನೀಡಿತ್ತು ಅದನ್ನು ಕ್ರೀಡಾ ಇಲಾಖೆಗೆ ವರ್ಗಾಯಿಸಿ ಅಧಿಕೃತವಾಗಿ ಹಕ್ಕುಪತ್ರ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಮಾತನಾಡಿ, ‘2024-25ನೇ ಸಾಲಿನಲ್ಲಿ ಕ್ರೀಡಾಂಗಣಕ್ಕೆ ಅನುದಾನ‌ ದೊರಕಿದ್ದು, ನಿರ್ಮಾಣ ಪ್ರಸ್ತಾವನೆಗೆ ಭೂಮಿ ನೀಡಲಾಗಿತ್ತು. ಈಗ ಭೂಮಿ ನಮ್ಮ‌ ವ್ಯಾಪ್ತಿಗೆ ಬಂದಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುತ್ತಿದ್ದು, ಕ್ರಿಯಾ ಯೋಜನೆ ಸಿದ್ಧವಾಗಿದೆ’ ಎಂದರು.

‘ಇನ್ನು 15ರಿಂದ 20 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಮಾಡಲಾಗುತ್ತದೆ. ಉದ್ದೇಶಿತ ಕಾಮಗಾರಿಯನ್ನು ₹6 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು. ಕಳೆದ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಅನುದಾನ ಘೋಷಣೆ ಮಾಡಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲೇ ಕಾಮಗಾರಿ ಆರಂಭಿಸಿ ತ್ವರಿತವಾಗಿ ಕ್ರೀಡಾಂಗಣ ನಿರ್ಮಾಣ ಕಾರ್ಯ ಮುಗಿಸುತ್ತೇವೆ’ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎಇಇ ಜಯಪ್ರಕಾಶ್, ತಾಲ್ಲೂಕು ಭೂ ಮಾಪಕ ಉಮೇಶ್, ಕಂದಾಯಾಧಿಕಾರಿ ಮಹೇಂದ್ರ, ಹಿರಿಯ ಮುಖಂಡ ಬಿ.ಮರಯ್ಯ, ಕೆಡಿಪಿ ಸದಸ್ಯ ದಿವಾಕರ್, ಯಜಮಾನ್ ಚಿಕ್ಕಲಿಂಗಯ್ಯ, ಸಿಪಿಐ ಧನಂಜಯ್, ಸಬ್ ಇನ್ಸ್‌ಪೆಕ್ಟರ್ ಜಗದೀಶ್‌ ದೂಳ್ ಶೆಟ್ಟಿ, ಎಎಸ್‌ಐ ಚೆಲುವರಾಜು, ಕಾನ್‌ಸ್ಟೆಬಲ್‌ಗಳಾದ ಮಹೇಶ್, ಶಂಕರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.